ಕೊರೋನವನ್ನು ವೈಜ್ಞಾನಿಕವಾಗಿ ಎದುರಿಸಬೇಕಾಗಿದೆ: ಡಾ.ಕೊಂಚಾಡಿ
![ಕೊರೋನವನ್ನು ವೈಜ್ಞಾನಿಕವಾಗಿ ಎದುರಿಸಬೇಕಾಗಿದೆ: ಡಾ.ಕೊಂಚಾಡಿ ಕೊರೋನವನ್ನು ವೈಜ್ಞಾನಿಕವಾಗಿ ಎದುರಿಸಬೇಕಾಗಿದೆ: ಡಾ.ಕೊಂಚಾಡಿ](https://www.varthabharati.in/sites/default/files/images/articles/2021/07/16/299101-1626438914.jpg)
ಕುಂದಾಪುರ, ಜು.16: ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈಜ್ಞಾನಿಕವಾಗಿ ಕೊರೋನಾ ಸೋಂಕನ್ನು ಎದುರಿಸಬೇಕಿದೆ. ಮುಗ್ಧ ಜನರಲ್ಲಿ ಭಯವನ್ನುಂಟು ಮಾಡದೇ ದೈರ್ಯವಾಗಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿ ಹೇಳಿದ್ದಾರೆ.
ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಕಾರೆಬೈಲು ಎಂಬಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಆದಿವಾಸಿ ಸಮುದಾಯಗಳಲ್ಲಿ ಕೋವಿಡ್ ಮತ್ತು ಆರೋಗ್ಯ ಸಂರಕ್ಷಣೆ ಕುರಿತ ಜಾಗೃತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಡಾ.ಎಸ್.ವೈ.ಗುರುಶಾಂತ್ ಮಾತನಾಡಿ, ಆದಿವಾಸಿ ಸಮುದಾಯಗಳು ಅತ್ಯಂತ ಆರೋಗ್ಯದಾಯಕ ಬದುಕು ನಡೆಸಿದವರು. ಆದರೆ ಇಂದಿನ ದಿನಗಳಲ್ಲಿ ಅತ್ಯಂತ ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕೆಲವು ಸಮುದಾಯ ಗಳು ಅಳಿವಿನ ಅಂಚಿನಲ್ಲಿ ಇವೆ. ಇದಕ್ಕೆ ಸರಕಾರದ ಅರಣ್ಯ ನೀತಿಗಳು, ಜೀವ ವೈವಿಧ್ಯತೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ನಿರ್ಬಂಧಗಳು ಕೂಡ ಕಾರಣವಾಗಿವೆ. ಆದಿವಾಸಿ ಸಮುದಾಯಗಳ ಬದುಕು ಉಳಿಯಲು ಒಟ್ಟು ವೆವಸ್ಥೆಗೆ ಇವರ ಕುರಿತು ಸಂವೇದನೆ ಅಗತ್ಯವಿದೆ ಎಂದರು.
ವೈದ್ಯ ಡಾ.ಎ.ಅನಿಲ್ ಕುಮಾರ್ ಬಾಗೇಪಲ್ಲಿ ಮಾತನಾಡಿ, ಕೋವಿಡ್ ಗುಣಲಕ್ಷಣಗಳು ಇದ್ದರೂ ಗ್ರಾಮೀಣ ಜನರು ಆರಂಭದಲ್ಲಿಯೇ ವೈದ್ಯರ ಬಳಿಗೆ ತೆರಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ದೂರುಗಳಿವೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣದ ಬಗ್ಗೆಯೂ ಅರಿವು ಇರುವುದಿಲ್ಲ. ಈ ಎಲ್ಲ ದೃಷ್ಟಿಯಿಂದ ಪ್ರಾಥಮಿಕ ಹಂತದಲ್ಲಿಯೇ ರೋಗಿಗಳನ್ನು ಗುರುತಿಸುವ ಕೆಲಸವನ್ನು ಆದಿವಾಸಿ ಆರೋಗ್ಯ ಸಂರಕ್ಷಣೆ ಸ್ವಯಂ ಸೇವಕರು ಮಾಡುತ್ತಾರೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಜಲಜ ಕತ್ತಲಕೊಡು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಶ್ರೀಕಾಂತ ಕೊಲ್ಲೂರು ಮಾತನಾಡಿದರು. ಈ ಸಂದರ್ಭದಲ್ಲಿ ಆದಿವಾಸಿ ಆರೋಗ್ಯ ಸ್ವಯಂ ಸೇವಕರಿಗೆ ಅಗತ್ಯ ಔಷಧಿ ಮತ್ತು ತಪಾಸಣೆ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಾಗಾರದಲ್ಲಿ ಮೂರ್ತಿ ಕಬ್ಬಿನಾಲೆ, ರವಿ ದೇವರಬಾಳು, ರಾಜೇಶ್ ಕೊಟುಗುಳಿ, ಸುಧಾಕರ ಕಾರೆಬೈಲು, ಸಂಜು ಕಾರೆಬೈಲು, ಬೇಬಿ ಕತ್ತಲಕೊಡು, ಶಿವರಾಜ್ ನಾಡ, ಗಣೇಶ ಆಲೂರು ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿದರು. ಸುಧಾ ವಂದಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಕಾರ್ಯ ಕ್ರಮ ನಿರೂಪಿಸಿದರು.