ಕಾರ್ಮಿಕರ ಫಲಾನುಭವಿ ಕಾರ್ಡ್ಗೆ 700 ರೂ.ವಸೂಲಿ: ಸಾರ್ವಜನಿಕರ ಗಂಭೀರ ಆರೋಪ
ಧಾರವಾಡ, ಜು.16: ಕೊರೋನ ಹಿನ್ನೆಲೆಯಲ್ಲಿ ಸರಕಾರ ಕಾರ್ಮಿಕರಿಗೆ ಫಲಾನುಭವಿ ಕಾರ್ಡ್ ನೀಡಲು ತೀರ್ಮಾನ ಕೈಗೊಂಡಿದೆ. ಆದರೆ, ಧಾರವಾಡ ಜಿಲ್ಲೆಯ ಕಲಘಟಗಿಯ ಕಾರ್ಮಿಕ ಇಲಾಖೆಯಲ್ಲಿ ಇರುವ ಏಜೆಂಟರಗಳು ಕಾರ್ಡ್ ಮಾಡಿಸಿಕೊಡಲು ಶುಲ್ಕ 30 ರೂ. ಬದಲಾಗಿ 700 ರೂ.ಪಡೆಯುತ್ತಿದ್ದಾರೆ ಎಂಬ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.
ನೋಂದಾಯಿತ ಕಾರ್ಮಿಕರಿಗೆ ಮಾತ್ರ ಫಲಾನುಭವಿ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ, ಕೂಲಿ ಕಾರ್ಮಿಕರು ಇಲಾಖೆಯಿಂದ ನೋಂದಣಿ ಮಾಡಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರೋ ಕೆಲ ಏಜೆಂಟರಗಳು ಕಾರ್ಮಿಕ ಇಲಾಖೆಯಲ್ಲೂ ತಮ್ಮ ವಸೂಲಿ ದಂಧೆ ಶುರುಮಾಡಿಕೊಂಡಿದ್ದಾರೆ. ಬಡ ಕಾರ್ಮಿಕರಿಂದ ಪ್ರತಿ ನಿತ್ಯ ಸಾವಿರಾರು ರೂಪಾಯಿ ವಸೂಲಿ ಮಾಡಲು ಶುರುಮಾಡಿದ್ದಾರೆ.
ಕಾರ್ಡ್ ನೋಂದಣಿಗೆ ಸರಕಾರಿ ಶುಲ್ಕ ಇರುವುದೇ ಕೇವಲ 30 ರೂಪಾಯಿ. ಆದರೆ ಏಜೆಂಟರ್ ಗಳು ಬಡ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೇ, ಸರಕಾರಿ ಕಚೇರಿಯಲ್ಲಿಯೇ ರಾಜಾರೋಷವಾಗಿ ಅವ್ಯವಹಾರ ಮಾಡುತ್ತಿದ್ದು, ಏಜೆಂಟರ ಹಾವಳಿಗೆ ಜನರು ಬೇಸತ್ತಿದ್ದಾರೆ.