ಜು.21ರ ಬಕ್ರೀದ್ ಆಚರಣೆಗೆ ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಟ: ಈದ್ಗಾಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ
ಮಸೀದಿಗಳಲ್ಲಿ ಹಂತ ಹಂತವಾಗಿ ನಮಾಝ್ಗೆ ಅವಕಾಶ
ಮಂಗಳೂರು, ಜು.16: ರಾಜ್ಯಾದ್ಯಂತ ಜು.21ರಂದು ನಡೆಯುವ ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿ ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರವು ಕೆಲವೊಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಬಕ್ರೀದ್ ಅಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಝ್)ಗೆ ನಿರ್ಬಂಧ ಹೇರಲಾಗಿದೆ. ಮಸೀದಿಗಳಲ್ಲಿ 50 ಮಂದಿಗಿಂತ ಹೆಚ್ಚು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಒಂದು ವೇಳೆ ಅಧಿಕ ಮಂದಿ ಮಸೀದಿಗೆ ಆಗಮಿಸಿದರೆ ಹಂತ ಹಂತವಾಗಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಬಹುದಾಗಿದೆ.
ಮಸೀದಿಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು, 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ತೆರಳಬಾರದು. ನಮಾಝ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿ ಅಂತರವಿರಬೇಕು. ಮಸೀದಿಗೆ ಪ್ರವೇಶಿಸುವ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಝರ್ನಿಂದ ಶುಚಿಗೊಳಿಸಬೇಕು. ಮನೆಯಿಂದಲೇ ಮುಸಲ್ಲಾ ವನ್ನು ಕೊಂಡೊಯ್ಯಬೇಕು. ಹಸ್ತಲಾಘವ ಮತ್ತು ಆಲಿಂಗನ ಮಾಡಬಾರದು ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ರಸ್ತೆಗಳು, ಪಾದಚಾರಿ ಮಾರ್ಗಗಳು, ಎಲ್ಲಾ ರೀತಿಯ ಆಸ್ಪತ್ರೆಯ ಆವರಣಗಳು, ನರ್ಸಿಂಗ್ ಹೋಂ ಒಳ ಮತ್ತು ಹೊರ ಆವರಣಗಳು, ಶಾಲಾ ಕಾಲೇಜುಗಳಲ್ಲಿ ತರಗತಿ ನಡೆಯುತ್ತಿದ್ದಲ್ಲಿ ಅಂತಹ ಶಾಲಾ-ಕಾಲೇಜುಗಳ ಒಳ ಮತ್ತು ಹೊರ ಆವರಣಗಳು, ಆಟದ ಮೈದಾನಗಳು, ಮಸೀದಿ ಮತ್ತು ಇತರ ಧಾರ್ಮಿಕ ಸ್ಥಳ-ಆವರಣಗಳು, ಉದ್ಯಾನವನಗಳ ಒಳಗೆ ಮತ್ತಿ ಹೊರಗೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮತ್ತು ಬಲಿದಾನ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.







