ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ಸೊಂದು ಬೈಕಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಪೆರಿಯಶಾಂತಿ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.
ಹಾಸನ ಜಿಲ್ಲೆಯ ಕೆಂಚಮ್ಮ ಹೊಸಕೋಟೆ ಹೋಬಳಿ, ಆಡ್ಯ ಮನೆ ನಿವಾಸಿ ಲೋಕೇಶ್ ಆಚಾರ್ರವರ ಮಗ ಅರುಣ್ (33) ಮೃತ ವ್ಯಕ್ತಿ. ಬೈಕಿನಲ್ಲಿದ್ದ ಇನ್ನೋರ್ವ ಸವಾರ ಮೋಹನ್ (36) ಎಂಬವರು ಮೂಳೆ ಮುರಿತಕ್ಕೆ ಒಳಗಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅರುಣ್ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮಗಳನ್ನು ನೋಡಲೆಂದು ಪತ್ನಿ ಮನೆಗೆ ಹೊರಟಾಗ ಎದುರಾದ ಸಾವು: ಅರುಣ್ ರವರು ಪುತ್ತೂರಿನ ಯುವತಿಯನ್ನು ವಿವಾಹವಾಗಿದ್ದು, ಎರಡು ವರ್ಷದ ಮಗಳು ಹಾಗೂ ಒಂದು ತಿಂಗಳ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಪತ್ನಿ ಎರಡನೇ ಹೆರಿಗಾಗಿ ತವರು ಮನೆಗೆ ಬಂದಿದ್ದು, ತಿಂಗಳ ಹಿಂದೆಯಷ್ಟೇ ಎರಡನೇ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಪತ್ನಿ ಹಾಗೂ ಮಗುವನ್ನು ನೋಡುವ ಆಸೆಯಿಂದ ಗೆಳೆಯನೊಂದಿಗೆ ಬೈಕಿನಲ್ಲಿ ಪುತ್ತೂರಿಗೆಂದು ಪ್ರಯಾಣಿಸುತ್ತಿದ್ದಾಗ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗುಂಡ್ಯದಲ್ಲಿ ಬಸ್ಗೆ ತಡೆ: ಅಪಘಾತವೆಸಗಿದ ಬಸ್ ಚಾಲಕ ಬಸ್ನೊಂದಿಗೆ ಪರಾರಿಯಾಗಿದ್ದು, ಈ ಬಸ್ ಅನ್ನು ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.