ಗೋವಿನ ಬಗ್ಗೆ ಅರಿವು ಮೂಡಿಸಲು ಕ್ರಮ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು, ಜು. 17: `ರಾಜ್ಯದಲ್ಲಿ ಪಶುಸಂಗೋಪನೆ ಇಲಾಖೆ ರೈತರು ಹಾಗೂ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿವಾರಗಬೇಕು ಎಂಬ ಉದ್ದೇಶದಿಂದ ಗೋ ಉತ್ಪನ್ನಗಳಿಂದ ಔಷಧ ತಯಾರಿಸುವುದು, ಸಾಮಾಜಿಕ ಜೀವನದಲ್ಲಿ ಗೋವಿನ ಪಾತ್ರ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನದ ಕುರಿತು ವ್ಯವಸ್ಥಿತವಾಗಿ ಹೆಜ್ಜೆ ಇಡುತ್ತಿದೆ' ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಗೋ ಉತ್ಪನ್ನಗಳಿಂದ ಔಷಧ: `ಗೋವುಗಳು ಧಾರ್ಮಿಕವಾಗಿ ನಮ್ಮ ಜೀವನದಲ್ಲಿ ಬೆಸೆದುಕೊಂಡಿವೆ. ಗೋವಿನ ಉತ್ಪನ್ನಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಪಾರಂಪರಿಕವಾಗಿ ಗೋಮೂತ್ರ, ಸಗಣಿ ಔಷಧ ರೂಪದಲ್ಲಿ ಬಳಕೆಯಾಗುತ್ತಿದ್ದು, ಅನೇಕ ಕಾಯಿಲೆಗಳು ಪಂಚಗವ್ಯದಂತಹ ವಿಶಿಷ್ಟ ಸಂಯೋಜನೆಯಿಂದ ಗುಣಮುಖ ಉದಾಹರಣೆಗಳಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಇಲಾಖೆ ಗೋ ಉತ್ಪನ್ನಗಳಿಂದ ಔಷಧವನ್ನು ತಯಾರಿಸಿ ಮಾನವರ ಚಿಕಿತ್ಸೆಗೆ ಬಳಸಿಕೊಳ್ಳವ ಸಾಧ್ಯತೆಗಳ ಬಗ್ಗೆ ಆರೋಗ್ಯ ಅನುಮತಿ ಕೋರಿದೆ' ಹೇಳಿದ್ದಾರೆ.
ಶಿಕ್ಷಣದಲ್ಲಿ ಗೋವಿನ ಮಹತ್ವ: `ವಿದ್ಯಾರ್ಥಿಗಳಿಗೆ ಸಾಮಾಜಿಕ ಪರಿಸರ ಅಧ್ಯಯನದ ಭಾಗವಾಗಿ ಗೋವಿನ ಜೊತೆಗಿರುವ ಮಾನವ ಸಂಬಂಧ ಹಾಗೂ ಜೈವಿಕ ವೈವಿಧ್ಯತೆ, ಪರಿಸರ ಅವಲಂಬನೆ, ಪರಿಸರ ಸಂರಕ್ಷಣೆ ಕುರಿತು ಚಿಕ್ಕ ವಯಸ್ಸಿನಲ್ಲಿಯೆ ಮಕ್ಕಳಿಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಅಂದಾಗ ನಮ್ಮ ಗೋವುಗಳ ಬಗೆಗಿನ ನಮ್ಮ ಶ್ರದ್ಧೆ, ಅವಲಂಬನೆ ಎಲ್ಲವೂ ಮುಂದಿನ ಪೀಳಿಗೆಗೆ ನೀಡಬಹುದಾಗಿದೆ. ಭಾರತೀಯ ಗೋವಿನ ಕುರಿತು 1 ರಿಂದಲೇ 12ನೆ ತರಗತಿಯ ವರೆಗೆ ಗೋವಿನ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ಪಠ್ಯವನ್ನು ಅಳವಡಿಸಿದಲ್ಲಿ ಮಕ್ಕಳಲ್ಲಿ ಗೋವಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಈ ಕುರಿತಾಗಿ ಪತ್ರ ಬರೆಯಲಾಗಿದೆ. ಶಿಕ್ಷಣ ಸಚಿವರೊಂದಿಗೆ ಇದನ್ನು ಚರ್ಚಿಸಿ ಗೋವಿನ ಬಗ್ಗೆ ಪಠ್ಯವನ್ನು ಅಳವಡಿಸಲು ಕೋರಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಗೋ ಶಾಲೆಗಳ ಪ್ರತಿನಿಧಿಗಳೊಂದಿನ ಸಭೆ ನಡೆಸಿದ ಸಂದರ್ಭದಲ್ಲಿ ಅನೇಕ ಗೋಶಾಲೆಯ ಪ್ರತಿನಿಧಿಗಳು ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡುವ ಕುರಿತು ಕೋರಿಕೆ ಇಟ್ಟಿದ್ದರು. ಇದನ್ನು ಪರಿಗಳಿಸಿ ಗೋಶಾಲೆಯ ಚಟುವಟಿಕೆಗಳನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸಿ ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ಅಥವಾ ಸಬ್ಸಿಡಿ ನೀಡುವಂತೆ ಇಂದನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಗೋಸಂಪತ್ತನ್ನು ಸಂರಕ್ಷಿಸುವಲ್ಲಿ ಗೋ ಶಾಲೆಗಳ ಪಾತ್ರ ಬಹುದೊಡ್ಡದು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸೂಚನೆ: ರಾಜ್ಯದಲ್ಲಿ ಗೋಹತ್ಯೆ ನೀಷಧ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕಾದರೆ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಪಾತ್ರ ಮುಖ್ಯ. ಪ್ರತಿ ಜಿಲ್ಲೆಗೊಂದು ಗೋಶಾಲೆಯನ್ನು ತೆರೆಯಲು ನಿರ್ಧರಿಸಲಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಆದುದರಿಂದ ಗೋಶಾಲೆಗಳಿಗೆ ಆದಷ್ಟು ಬೇಗ ಸ್ಥಳ ಗುರುತಿಸಿ ಗೋಶಾಲೆ ಸ್ಥಾಪನೆಗೆ ಮುಂದಾಗಲು ಸೂಚನೆ ನೀಡಲಾಗಿದೆ.
ಅಲ್ಲದೆ, ಎಸ್ಪಿಸಿಎ ಸಮಿತಿಯ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಇರುವುದರಿಂದ ಇದರ ಸಮರ್ಪಕವಾದ ಅನುಷ್ಠಾನಕ್ಕೆ ಪ್ರತಿ ತಿಂಗಳ ಮೂರನೇ ಶನಿವಾರ ಅಥವಾ ಮೂರು ತಿಂಗಳಲ್ಲಿ ಎರಡು ಸಭೆಗಳನ್ನು ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗೋವುಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೋವುಗಳ ಸಂಖ್ಯೆ ವೃದ್ಧಿಮಾಡಲು ಇಲಾಖೆಯಿಂದ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಗೋವಿನೊಂದಿಗೆ ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ನಾವೆಲ್ಲ ಹೊಂದಿಕೊಂಡಿರುವುದರಿಂದ ಇದರ ಸಂರಕ್ಷಣೆ ಮತ್ತು ಸಂವರ್ಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







