ಬ್ಯಾಂಕುಗಳ ಖಾಸಗೀಕರಣ ದೇಶದ ಹಿತಾಸಕ್ತಿಗೆ ಮಾರಕ: ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ
ಬೆಂಗಳೂರು, ಜು. 18: ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರಿಂದಲೇ ಕೃಷಿಕರಿಗೆ, ತಳಸ್ತರದ ಜನರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಯಿತು ಈಗೇನಾದರೂ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದರೆ ದೇಶದ ಅಭಿವೃದ್ಧಿ, ಹಿತಾಸಕ್ತಿಗೆ ಮಾರಕವಾಗಲಿದೆ ಹಾಗೂ ಸಾಮಾಜಿಕ ನ್ಯಾಯ ಮರೆಯಾಗಲಿದೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ 53ನೆ ಬ್ಯಾಂಕ್ ರಾಷ್ಟ್ರೀಕರಣ ದಿನಾಚರಣೆಯ ಅಂಗವಾಗಿ `ಬಿಇಎಫ್ಐ-ಕರ್ನಾಟಕ ಹಮ್ಮಿಕೊಂಡಿದ್ದ ಬ್ಯಾಂಕಿಂಗ್ ಕ್ಷೇತ್ರ: ಅಂದು-ಇಂದು' ಕುರಿತ ವೆಬಿನಾರ್ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ಯಾಂಕುಗಳ ಖಾಸಗೀಕರಣದಿಂದ ದೇಶಕ್ಕೆ ದೊಡ್ಡ ಆಪತ್ತು ಎದುರಾಗಲಿದೆ. ಇದು ಸಂವಿಧಾನ ವಿರೋಧಿ ನಿಲುವು ಎಂದು ಬುದ್ದಿಜೀವಿಗಳು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರಕಾರದ ನೀತಿಯ ಬಗ್ಗೆ ನ್ಯಾಯಮೂರ್ತಿಗಳೂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದರು.
ಇಂದಿರಾ ಗಾಂಧಿ ಅವರು ದೇಶದ ಅಭಿವೃದ್ಧಿ ಹಾಗೂ ಬಡ ಜನರ ಆರ್ಥಿಕ ವೃದ್ಧಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದ್ದರು. ಆದರೆ, 1991ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರವೇ ಬ್ಯಾಂಕ್ಗಳ ಖಾಸಗೀಕರಣಕ್ಕೆ ಬುನಾದಿ ಹಾಕಿಕೊಟ್ಟಿತ್ತು. ಇದನ್ನು ಈಗಿನ ಎನ್ಡಿಎ ಸರಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ನಾವೆಲ್ಲ ಗಟ್ಟಿ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಯಾರ ಹಂಗಿನಲ್ಲೂ ಇರಬಾರದು. ಆದರೆ ಈಗ ದೇಶದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ದೇಶಿ ಬಂಡವಾಳ ಹೂಡಿಕೆದಾರರು ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಶಾಸಕಾಂಗ ಹಾಗೂ ನ್ಯಾಯಾಂಗದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳೆರಡೂ ಇರಲೇಬೇಕು. ಭದ್ರತೆ, ಸಂಶೋಧನೆ, ಅಭಿವೃದ್ಧಿ ಹಾಗೂ ಹಣಕಾಸು ಕ್ಷೇತ್ರಗಳು ಸರಕಾರದ ಸ್ವಾಮ್ಯದಲ್ಲಿರಬೇಕು. ಇಲ್ಲದೆ ಹೋದರೆ ದೇಶದ ಭದ್ರತೆಗೆ ಕುತ್ತು ಉಂಟಾಗುತ್ತದೆ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ(ಹಂಪಿ) ನಿವೃತ್ತ ಪ್ರಾಧ್ಯಾಪಕ ಎಂ.ಚಂದ್ರ ಪೂಜಾರಿ ಮಾತನಾಡಿ, ಅರ್ಥಶಾಸ್ತ್ರ ಹಾಗೂ ರಾಜಕೀಯದ ನಡುವೆ ಗಾಢವಾದ ಸಂಬಂಧ ಇದೆ. ಜನಪರ ಆರ್ಥಿಕ ನೀತಿಗಳು ಬೇಕಾದರೆ ಜನಪರ ರಾಜಕೀಯವೂ ಇರಬೇಕಾಗುತ್ತದೆ. ರಾಷ್ಟ್ರೀಕರಣದ ನಂತರ ಬ್ಯಾಂಕ್ಗಳ ಮೇಲೆ ಜನರಿಗೆ ನಂಬಿಕೆ ಹುಟ್ಟಿಕೊಂಡಿತ್ತು. ಆರ್ಥಿಕತೆಗೂ ಹೊಸ ಚೈತನ್ಯ ಮೂಡಿತ್ತು ಎಂದರು. ಸಿಐಟಿಯು-ಕರ್ನಾಟಕ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಬಿಇಎಫ್ಐ-ಕರ್ನಾಟಕ ಅಧ್ಯಕ್ಷ ಕೆ.ಶ್ರೀನಿವಾಸ ಬಾಬು ಉಪಸ್ಥಿತರಿದ್ದರು.
`ಕಲ್ಯಾಣ ರಾಜ್ಯ ಕಟ್ಟುವುದು ಸಂವಿಧಾನದ ಮೂಲ ಆಶಯ. ಆದರೆ ನೀರು, ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಹೀಗೆ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ. ಶೇ.60ರಷ್ಟು ಸಂಪತ್ತು ಶೇ.1ರಷ್ಟು ಮಂದಿಯ ಬಳಿ ಇದೆ. ಹೀಗಾಗಿ ಸಮಾಜದಲ್ಲಿ ಅಸಮಾನತೆ ನೆಲೆಸಿದೆ. ಖಾಸಗೀಕರಣದಿಂದ ಸಾಮಾಜಿಕ ನ್ಯಾಯವೂ ಅಪ್ರಸ್ತುತವಾಗುತ್ತಿದೆ'
-ಎಚ್.ಎನ್.ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ







