ಸಿಡಿ ಪ್ರಕರಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆಂಬ ಸುದ್ದಿ ಸುಳ್ಳು: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು, ಜು.18: ನಾನು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ಖಾಸಗಿ ವೆಬ್ ಸೈಟ್ ಒಂದು ಸುದ್ದಿ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ ಅಗತ್ಯವೂ ನನಗಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೆಲವು ಕುಚೋದ್ಯದ ಸಂಗತಿಗಳನ್ನು ಮುಂದಿಟ್ಟುಕೊಂಡು ನಾನು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದೇನೆ ಎಂದು ಕೆಲವರು ಹಸಿಬಿಸಿ ಸುದ್ದಿಗಳನ್ನು ಹಬ್ಬುಸುತ್ತಿರುವುದು ನನ್ನ ಮನಸ್ಸಿಗೆ ಅತ್ಯಂತ ನೋವು ತಂದಿದೆ ಎಂದು ಹೇಳಿದ್ದಾರೆ.
2020 ರಲ್ಲಿ ನಾನು ಪ್ರಕರಣವೊಂದರ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದನ್ನು ಈಗ ಏಕೆ? ಪ್ರಸ್ತಾಪಿಸುತ್ತಿದ್ದಾರೆ ಎಂಬ ಹುನ್ನಾರವೂ ನನಗೆ ಅರ್ಥವಾಗುತ್ತಿಲ್ಲ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ನನ್ನ ಮೇಲೆ ಆಗಾಗ್ಗೆ ಇಂತಹ ಆಧಾರರಹಿತ ಆರೋಪಗಳನ್ನು ಕೆಲವು ಕಾಣದ ಕೈಗಳು ಮಾಡುತ್ತಲೇ ಬಂದಿದ್ದರೂ ನಾನು ಎದೆಗುಂದಿಲ್ಲ ಎಂದು ನಿರಾಣಿ ತಿಳಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿದ್ದಾಗ ಕೆಲವು ಸಂದರ್ಭಗಳಲ್ಲಿ ಇಂತಹ ಆಧಾರರಹಿತ ವದಂತಿಗಳು ಹಬ್ಬುವುದು ಸರ್ವೇಸಾಮಾನ್ಯ. ನನ್ನ ಹಿತೈಷಿಗಳು ಹಾಗೂ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಕಾರ್ಯಕರ್ತರು ದೃತಿಗೇಡಬಾರದೆಂದು ನನ್ನ ಕಳಕಳಿ ಎಂದು ಅವರು ತಿಳಿಸಿದ್ದಾರೆ.
ನಾನು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ಖಾಸಗಿ ವೆಬ್ ಸೈಟ್ ಒಂದು ಸುದ್ದಿ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ ಅಗತ್ಯವೂ ನನಗಿಲ್ಲ.
— Murugesh R Nirani (MRN) (@NiraniMurugesh) July 18, 2021
(1/5)







