ಎಸೆಸೆಲ್ಸಿ ಪರೀಕ್ಷೆ: ಉಡುಪಿಯಲ್ಲಿ ಶೇ.99.90 ವಿದ್ಯಾರ್ಥಿಗಳ ಹಾಜರಾತಿ
ಒಟ್ಟು 12,879 ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ 13 ಮಂದಿ ಗೈರುಹಾಜರು
![ಎಸೆಸೆಲ್ಸಿ ಪರೀಕ್ಷೆ: ಉಡುಪಿಯಲ್ಲಿ ಶೇ.99.90 ವಿದ್ಯಾರ್ಥಿಗಳ ಹಾಜರಾತಿ ಎಸೆಸೆಲ್ಸಿ ಪರೀಕ್ಷೆ: ಉಡುಪಿಯಲ್ಲಿ ಶೇ.99.90 ವಿದ್ಯಾರ್ಥಿಗಳ ಹಾಜರಾತಿ](https://www.varthabharati.in/sites/default/files/images/articles/2021/07/19/299497-1626709651.jpg)
ಉಡುಪಿ, ಜು.19: ಕೋವಿಡ್ ಭೀತಿಯ ಮಧ್ಯೆ ಇಂದು ಜಿಲ್ಲೆಯ ಒಟ್ಟು 77 ಕೇಂದ್ರಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಗೆ ಒಟ್ಟು 12879 ರೆಗ್ಯೂಲರ್ ವಿದ್ಯಾರ್ಥಿಗಳ ಪೈಕಿ 12866 ಮಂದಿ ಹಾಜರಾಗಿದ್ದು, 13 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.99.90 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಉಡುಪಿ ತಾಲೂಕಿನ 21, ಕಾರ್ಕಳ 16, ಬೈಂದೂರು 13, ಕುಂದಾಪುರ 13 ಬ್ರಹ್ಮಾವರ 14 ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಈ ಮೂರು ವಿಷಯದ ಕುರಿತ ಪರೀಕ್ಷೆಗಳು ನಡೆದಿವೆ.
ಗಣಿತ ವಿಷಯದಲ್ಲಿ 205 ಖಾಸಗಿ ಮತ್ತು 521 ರಿಪಿಟರ್ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ 204 ಮತ್ತು 520, ವಿಜ್ಞಾನ ವಿಷಯದಲ್ಲಿ 221 ಖಾಸಗಿ ಮತ್ತು 558 ರಿಪಿಟರ್ ವಿದ್ಯಾರ್ಥಿಗಳ ಪೈಕಿ 220 ಮತ್ತು 555, ಸಮಾಜ ವಿಜ್ಞಾನ ವಿಷಯದಲ್ಲಿ 207 ಖಾಸಗಿ ಮತ್ತು 356 ರಿಪಿಟರ್ ಪೈಕಿ 206 ಮತ್ತು 356 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಡಿಸಿ, ಸಿಇಓ ಭೇಟಿ: ಉಡುಪಿ ಜಿಲ್ಲಾಧಿಕಾರಿ ಜಿ..ಜಗದೀಶ, ಜಿಪಂ ಸಿಇಓ ಡಾ.ನವೀನ್ ಭಟ್, ಡಿಡಿಪಿಐ ಎನ್.ಎಚ್.ನಾಗೂರ, ಮಂಗಳೂರು ಸಿಟಿಇ ಸಹನಿರ್ದೇಶಕ ಡಾ.ಸಿಪ್ರಿಯಾನ್ ಮೆಂತೆರೋ, ಉಡುಪಿ ಬಿಇಓ ಎ.ಕೆ. ನಾಗೇಂದ್ರಪ್ಪ ಉಡುಪಿ ಮಹಿಳಾ ಕಾಲೇಜು ಉಡುಪಿ, ಬೋರ್ಡ್ ಹೈಸ್ಕೂಲ್, ಕಟಪಾಡಿ ಎಸ್ವಿ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದೇ ರೀತಿ ಡಿಡಿಪಿಐ ನಾಗೂರು ಉಡುಪಿ ಸೈಂಟ್ ಸಿಸಿಲಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ತೆರಳಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಶುಭ ಹಾರೈಸಿದರು. ಬಳಿಕ ಅವರು ಪೊಲಿಪು ಸರಕಾರಿ ಪ್ರೌಢಶಾಲೆ, ಮೂಳೂರು ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್, ಬೆಳ್ಮಣ್ ಸರಕಾರಿ ಪರವಿ ಪೂರ್ವ ಕಾಲೇಜು, ಬೆಳ್ಮಣ್ ಸಂತ ಮೇರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದರು.
ಇಬ್ಬರಿಗೆ ದೋಣಿ ವ್ಯವಸ್ಥೆ: ಪರೀಕ್ಷಾ ಕೇಂದ್ರಕ್ಕೆ ಬರಲು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಆಯಾ ಕೇಂದ್ರ, ಶಾಲೆ ಹಾಗೂ ಶಿಕ್ಷಕರು ಮಾಡಿಕೊಂಡಿ ದ್ದರು. ಪ್ರತಿ ಕೇಂದ್ರದಲ್ಲಿ ಸಹ ಪರೀಕ್ಷೆಯ ನಂತರ ಎಲ್ಲ ವಿದ್ಯಾರ್ಥಿಗಳಿಗೆ ಬಿಸ್ಕತ್ತು ಮತ್ತು ಬಾಳೆಹಣ್ಣು ನೀಡಲಾಯಿತು.
ಕೆಲವು ಕೇಂದ್ರಗಳನ್ನು ತಳಿರು ತೋರಣಗಳಿಂದ, ಬಲೂನ್ಗಳಿಂದ ಅಲಂಕರಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿರುವುದು ವಿಶೇಷವಾಗಿತ್ತು. ಪ್ರವಾಹದ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ ಮರವಂತೆ ಗ್ರಾಮದ ದ್ವೀಪ ನಿವಾಸಿಗಳಾದ ಶಿಲ್ಪಾ ಮತ್ತು ಸಂಜನಾ ಎಂಬ ವಿದ್ಯಾರ್ಥಿಗಳು ದೋಣಿ ಮೂಲಕ ಆಗಮಿಸಿ, ಬಳಿಕ ಅವರನ್ನು ನಾವುಂದ ಪರೀಕ್ಷಾ ಕೇಂದ್ರಕ್ಕೆ ಕಾರಿನ ಮೂಲಕ ಕರೆ ತರಲಾಯಿತು.
ಪರೀಕ್ಷೆ ಬರೆದ ಐವರು ಕೊರೋನ ಸೋಂಕಿತರು!
ಕೊರೋನಾ ಸೋಂಕು ದೃಢಪಟ್ಟಿದ್ದ ಕಾರ್ಕಳ ತಾಲೂಕಿನ ಇಬ್ಬರು, ಬ್ರಹ್ಮಾವರ ತಾಲೂಕಿನ ಇಬ್ಬರು, ಕುಂದಾಪುರ ತಾಲೂಕಿನ ಒಬ್ಬರು ಸೇರಿದಂತೆ ಒಟ್ಟು ಐವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.
ಇಂದಿನ ಪರೀಕ್ಷೆಯಲ್ಲಿ ಯಾವುದೇ ಅಹಿತರ ಘಟನೆಗಳು ನಡೆದಿಲ್ಲ. ಜಿಲ್ಲಾ ಖಜಾನೆ, ಕಾರ್ಕಳ, ಕುಂದಾಪುರ ಉಪ ಖಜಾನೆಯಿಂದ ಸಕಾಲಕ್ಕೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 23 ಮಾರ್ಗಗಳಲ್ಲಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿದರು. ಪರೀಕ್ಷೆಗೆ ಹಾಜರಾದ ಯಾವುದೇ ಮಕ್ಕಳಲ್ಲಿ ಕೋವಿಡ್ ಲಕ್ಷ್ಮಣಗಳು ಕಂಡುಬಂದಿಲ್ಲ. ಎಲ್ಲರು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಯಾರಿಗೂ ಸಾರಿಗೆ ಸಮಸ್ಯೆ ಆಗಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಮೂಳೂರು ಅಲ್ಇಹ್ಸಾನ್ ಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರ
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನದಲ್ಲಿರುವ ಮೂಳೂರು ಅಲ್ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯನ್ನು ಈ ಬಾರಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರವಾಗಿ ಗುರುತಿಸಿದ್ದು, ಇಲ್ಲಿ ಇಂದು 294 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.
ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಸ್ಯಾನಿಟೈಜರ್, ಥರ್ಮಮೀಟರ್, ಸುರಕ್ಷಿತ ಅಂತರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೇಂದ್ರಕ್ಕೆ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಭೇಟಿ ನೀಡಿ ಕೇಂದ್ರದಲ್ಲಿ ಮಾಡಿರುವ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
![](https://www.varthabharati.in/sites/default/files/images/galllery/2021/07/19/WhatsApp Image 2021-07-19 at 4.40.18 PM.jpeg)