ಉಡುಪಿ: ಅಭಿವೃದ್ಧಿ ಪಡಿಸಲಾದ ತುಳು ಲಿಪಿ ಫಾಂಟ್ ಬಿಡುಗಡೆ

ಉಡುಪಿ, ಜು. 19: ಜೈತುಳು ನಾಡ್ ಸಂಘಟನೆಯ ವತಿಯಿಂದ ಅಭಿವೃದ್ಧಿ ಪಡಿಸಲಾದ ತುಳು ಲಿಪಿ ಫಾಂಟ್ ‘ತುಳು ಮಂದಾರ’ವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸೋಮವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು, ವಿಧಾನಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸುವಂತೆ ಸಭಾಧ್ಯಕ್ಷರಿಗೆ ಈ ಹಿಂದೆ ಮನವಿ ಮಾಡಲಾಗಿತ್ತು. ಆದರೆ ಇವುಗಳನ್ನು ದಾಖಲು ಮಾಡುವವರಿಗೆ ತುಳು ಭಾಷೆಯ ಅರಿವಿನ ಕೊರತೆಯಿರುವುದರಿಂದ ಇದಕ್ಕೆ ಅವಕಾಶ ನೀಡಿರಲಿಲ್ಲ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಜನಪ್ರತಿನಿಧಿಗಳಲ್ಲಿ ಈಗಾಗಲೇ ತುಳು ಭಾಷೆ ಹಾಗೂ ಲಿಪಿಯ ಬಗ್ಗೆ ಜಾಗೃತಿ ಮೂಡಿದೆ. ಮುಂದೆ ಸರಕಾರವೇ ಜನರಿಗೆ ತುಳು ಲಿಪಿ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸು ವಂತೆ ಸರಕಾರವನ್ನು ಒತ್ತಾಯಿಸಲಾಗುವುದು. ಅದಕ್ಕಿಂತ ಮುಖ್ಯವಾಗಿ ಈ ಭಾಷೆಯನ್ನು ಹಾಗೂ ಲಿಪಿಯನ್ನು ಜನ ಮಧ್ಯೆ ಕೊಂಡೊಯ್ಯುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಆಕಾಶ್ರಾಜ್ ಜೈನ್, ತಾರಾ ಆಚಾರ್ಯ, ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಫಾಂಟ್ ಡೆವೆಲಪರ್ ಪ್ರಹ್ಲಾದ್ ಪಿ.ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.







