ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸುವ ಕೃತಜ್ಞಾ ವಾಹನಕ್ಕೆ ನಟ ರಮೇಶ್ ಅರವಿಂದ್ ಚಾಲನೆ
ಹುತಾತ್ಮ ಆರೋಗ್ಯ ಕಾರ್ಯಕರ್ತರ ಮಕ್ಕಳಿಗೆ 2ಲಕ್ಷ ರೂ.ವಿದ್ಯಾರ್ಥಿ ವೇತನ, ಉದ್ಯೋಗದ ಭರವಸೆ
ಬೆಂಗಳೂರು, ಜು. 19: `ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ' ಎಂದು ನಟ ರಮೇಶ್ ಅರವಿಂದ್ ಹೇಳಿದರು.
ಸೋಮವಾರ ಕಾವೇರಿ ಆಸ್ಪತ್ರೆ ವತಿಯಿಂದ ಟೆನ್ನಿಸ್ ಅಸೋಸಿಯೇಷನ್ನಲ್ಲಿ ಆಯೋಜಿಸಿದ್ದ ಕೃತಜ್ಞಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, `ಎರಡು ವರ್ಷದಿಂದ ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ವಾರಿಯರ್ಸ್ಗಳಿಂದ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ. ತಾಯಿಯ ಋಣದಂತೆ ಕೋವಿಡ್ ವಾರಿಯರ್ಸ್ಗಳ ಋಣ ತೀರಿಸುವುದು ಅಸಾಧ್ಯ. ಕಾವೇರಿ ಆಸ್ಪತ್ರೆವತಿಯಿಂದ ಕೃತಜ್ಞಾ ಕಾರ್ಯಕ್ರಮದ ಭಾಗವಾಗಿ ನಗರದಲ್ಲಿರುವ ವಾರಿಯರ್ಸ್ಗಳಿಗೆ ಕೃತಜ್ಞತೆ ಸಲ್ಲಿಸಿ ಪ್ರಶಸ್ತಿ ನೀಡುವ ಸಾರ್ಥಕ ಹೆಜ್ಜೆ ಇಟ್ಟಿರುವುದು' ಶ್ಲಾಘನೀಯ ಎಂದರು.
ಆಸ್ಪತ್ರೆಯ ಕಾರ್ಯನಿರ್ವಾಹಕರ ನಿರ್ದೇಶಕ ವಿಜಯ ಭಾಸ್ಕರನ್ ಮಾತನಾಡಿ, `ಕೋವಿಡ್ ವಾರಿಯರ್ಸ್ಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಕೃತಜ್ಞಾ ಕಾರ್ಯಕ್ರಮವನ್ನು ಜುಲೈ 31ರಂದು ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿ ಇಂದಿನಿಂದ 5 ವಾಹನಗಳಲ್ಲಿ ನಗರದಲ್ಲಿರುವ 300ಕ್ಕೂ ಹೆಚ್ಚು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಲಿರುವ ನಮ್ಮ ತಂಡವು ಕೋವಿಡ್ ವಾರಿಯರ್ಗಳನ್ನು ಅಲ್ಲಿಯೇ ಸನ್ಮಾನಿಸಿ ಪ್ರಶಸ್ತಿ ನೀಡಲಿದೆ. ಇದರ ಜೊತೆಗೆ ಕೋವಿಡ್ ಚಿಕಿತ್ಸೆಗಾಗಿ ಹೊಸ ಆವಿಷ್ಕಾರ ಮಾಡಿದ ಆಸ್ಪತ್ರೆಗಳಿಗೆ ವಿಶೇಷ ಕ್ಯಾಟಗರಿಯಲ್ಲಿ ಪಶಸ್ತಿ ನೀಡಲಿದ್ದೇವೆ' ಎಂದು ಹೇಳಿದರು.
ಕೋವಿಡ್ನಿಂದ ಮೃತಪಟ್ಟ ವಾರಿಯರ್ಸ್ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದ ಭರವಸೆ: ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವಾರಿಯರ್ಸ್ಗಳ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ 2 ಲಕ್ಷ ರೂ.ವರೆಗೆ ವಿದ್ಯಾರ್ಥಿ ವೇತನ ಹಾಗೂ ಪದವೀಧರ ಮಕ್ಕಳಿಗೆ ಉದ್ಯೋಗ ಕೊಡಿಸಲು ಮುಂದಾಗಿದ್ದೇವೆ. ಸಂಬಂಧಪಟ್ಟ ಕುಟುಂಬಗಳು ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
5 ಕೃತಜ್ಞಾ ವಾಹನಗಳಿಗೆ ಚಾಲನೆ: ಇಂದಿನಿಂದ 12 ದಿನಗಳ ಕಾಲ 5 ಕೃತಜ್ಞಾ ವಾಹನಗಳಲ್ಲಿ ತೆರಳಲಿರುವ ಕಾವೇರಿ ಆಸ್ಪತ್ರೆಯ ತಂಡವರು, 300 ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ ಮಾಡಲಿದ್ದಾರೆ. ಮೊದಲ ದಿನದಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಸನ್ಮಾನ ಮಾಡಿದರು. ಇಂದು ಆ ವಾಹನಗಳಿಗೆ ನಟ ರಮೇಶ್ ಅರವಿಂದ್ ಅವರು ಚಾಲನೆ ನೀಡಿದರು. ಈ ವೇಳೆ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ.ವಿಲ್ಫೆಂಡ್ ಸ್ಯಾಮ್ಸನ್ ಉಪಸ್ಥಿತರಿದ್ದರು.







