ಪಿಯು ಫಲಿತಾಂಶ ಪ್ರಕಟ: ದ.ಕ. ಜಿಲ್ಲೆ ಪ್ರಥಮ
445 ವಿದ್ಯಾರ್ಥಿಗಳಿಗೆ 600 ಅಂಕ
![ಪಿಯು ಫಲಿತಾಂಶ ಪ್ರಕಟ: ದ.ಕ. ಜಿಲ್ಲೆ ಪ್ರಥಮ ಪಿಯು ಫಲಿತಾಂಶ ಪ್ರಕಟ: ದ.ಕ. ಜಿಲ್ಲೆ ಪ್ರಥಮ](https://www.varthabharati.in/sites/default/files/images/articles/2021/07/20/299589-1626792308.jpg)
ಮಂಗಳೂರು, ಜು.20: ಕರ್ನಾಟಕದಲ್ಲಿ 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದೆ. ಜಿಲ್ಲೆಯಲ್ಲಿ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದು, ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ.
ದ.ಕ. ಜಿಲ್ಲೆಯು ಕಳೆದ ಬಾರಿಯ (2019-20) ಶೈಕ್ಷಣಿಕ ವರ್ಷದಲ್ಲಿ ಶೇ.91.71 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿತ್ತು. ಈ ಬಾರಿ ಪ್ರಥಮ ಸ್ಥಾನ ಪಡೆದು ಮತ್ತೆ ದಾಖಲೆ ಸೃಷ್ಟಿಸಿದೆ.
ದ.ಕ. ಜಿಲ್ಲೆಯಲ್ಲಿ 32,342 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 31,299 ವಿದ್ಯಾರ್ಥಿಗಳು ಫ್ರೆಶರ್ಸ್ ಆಗಿದ್ದರೆ, ಇನ್ನುಳಿದ 1,043 ವಿದ್ಯಾರ್ಥಿಗಳು ಪುನರಾವರ್ತಿತರು.
ಬಾಲಕ-ಬಾಲಕಿಯರ ಲೆಕ್ಕಚಾರ: ದ.ಕ ಜಿಲ್ಲೆಯಲ್ಲಿ ಒಟ್ಟು 16,355 ಬಾಲಕರು ಮತ್ತು 15,987 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 1,909 ಬಾಲಕರು ಮತ್ತು 2,262 ಬಾಲಕಿಯರು, ವಾಣಿಜ್ಯ ವಿಭಾಗದಲ್ಲಿ 7,777 ಮತ್ತು 7,165, ವಿಜ್ಞಾನ ವಿಭಾಗದಲ್ಲಿ 6,669 ಮತ್ತು 6,560. ನಗರ ಪ್ರದೇಶದಲ್ಲಿ 11,078 ಬಾಲಕರು, 10,921 ಬಾಲಕಿಯರು, ಗ್ರಾಮೀಣ ಭಾಗದಲ್ಲಿ 5,277 ಮತ್ತು 5,066 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ಇಳಿಕೆ: ದ್ವಿತೀಯ ಪಿಯುಸಿಯಲ್ಲಿ 27,761 ಮಂದಿ ಇಂಗ್ಲೀಷ್ ಭಾಷೆಯನ್ನು ಪರೀಕ್ಷೆಗೆ ಆಯ್ಕೆ ಮಾಡಿಕೊಂಡಿದ್ದು, ಕನ್ನಡ ಭಾಷೆಯನ್ನು 4,581 ಮಂದಿ ಮಾತ್ರ ಆಯ್ಕೆ ಮಾಡಿಕೊಂಡಿದ್ದರು. ಕಲಾ ವಿಭಾಗದಲ್ಲಿ ಕನ್ನಡ ಭಾಷೆಯಲ್ಲಿ 2,215 ಮಂದಿ ನೋಂದಣಿ ಮಾಡಿಕೊಂಡಿದ್ದರೆ, ಇಂಗ್ಲಿಷ್ನಲ್ಲಿ 1956 ಮಂದಿ ನೋಂದಣಿಯಾಗಿದ್ದರು. ವಾಣಿಜ್ಯ ವಿಭಾಗದಲ್ಲಿ 12,577 ಮಂದಿ ಇಂಗ್ಲಿಷ್ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ, ಕನ್ನಡದಲ್ಲಿ 2,365 ಮಂದಿ ನೋಂದಣಿಯಾಗಿದ್ದರು. ವಿಜ್ಞಾನ ವಿಭಾಗದಲ್ಲಿ 13,228 ಮಂದಿ ನೋಂದಣಿ ಮಾಡಿದ್ದರೆ ಕನ್ನಡದಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಬರೆಯಲು ನೋಂದಣಿ ಮಾಡಿದ್ದ. ಇನ್ನುಳಿದವರು ಇಂಗ್ಲಿಷ್ಭಾಷೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು ಎನ್ನುವುದು ಪಿಯುಸಿ ಫಲಿತಾಂಶದಲ್ಲಿ ಕಂಡುಬಂದ ವಿವರ.
ಈ ಬಾರಿ ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಿಸಲಾಗಿದೆ. ಎಸೆಸೆಲ್ಸಿ (ಸಿಬಿಎಸ್ಸಿ, ಐಸಿಎಸ್ಸಿ, ಇತರ ಬೋರ್ಡ್) ಪರೀಕ್ಷೆಯಲ್ಲಿ ವಿಷಯವಾರು ಪಡೆದ ಅಂಕಗಳ ಶೇ.45 ಅಂಕ, ಪ್ರಥಮ ಪಿಯು ಜಿಲ್ಲಾ ಮಟ್ಟದ ಪರೀಕ್ಷೆಯ ವಿಷಯವಾರು ಶೇ.45 ಅಂಕಗಳು, ಮಂಡಳಿ ತಿಳಿಸಿದಂತೆ ದ್ವಿತೀಯ ಪಿಯುಸಿಯಲ್ಲಿ ಶೈಕ್ಷಣಿಕ ಚಟುವಟಿಕೆಗೆ ಸಂಬಂಧಪಟ್ಟಂತೆ ಶೇ.10 ಅಂಕ ನೀಡಲಾಗಿದೆ.
ಜೊತೆಗೆ ಪ್ರಥಮ ಪಿಯುನಲ್ಲಿ ಪಡೆದ ಅಂಕಗಳಿಗೆ ಶೇ.5 ಕೃಪಾಂಕ ಸೇರಿಸಿ ಫಲಿತಾಂಶವನ್ನು ನಿರ್ಣಯಿಸಲಾಗಿದೆ. ಪ್ರಸಕ್ತ ವರ್ಷದ ಎಲ್ಲ ಪುನರಾವರ್ತಿತ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ. ಕನಿಷ್ಠ ಉತ್ತೀರ್ಣ ಅಂಕ ಮತ್ತು ಶೇ.5 ಕೃಪಾಂಕ ನೀಡಿ, ಉತ್ತೀರ್ಣವೆಂದು ಘೋಷಿಸಿದೆ. ಆಯಾ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ದೂರವಾಣಿ ಸಂಖ್ಯೆಗೆ ಎಸ್ಎಂಎಸ್ ಮೂಲಕ ಇಲಾಖೆ ಫಲಿತಾಂಶ ಕಳುಹಿಸಿದೆ.
ಫಲಿತಾಂಶದಿಂದ ಅಸಮಾಧಾನಗೊಂಡವರಿಗೆ ಆಗಸ್ಟ್ 19ರಿಂದ ಸೆಪ್ಟಂಬರ್ 3ರವರೆಗೆ ಪರೀಕ್ಷೆ ನಡೆಯಲಿದೆ. ಫ್ರೆಶರ್ಸ್ ಫಲಿತಾಂಶ ತಿರಸ್ಕರಿಸಿ ಮತ್ತೆ ಪರೀಕ್ಷೆ ತೆಗೆದುಕೊಂಡರೆ ಅವರನ್ನು ಫ್ರೆಶರ್ಸ್ ಎಂದೇ ಪರಿಗಣಿಸಲಾಗುವುದು. ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದವರು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಜು.30 ಕೊನೆಯ ದಿನಾಂಕವಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.