‘ಪೆಗಾಸಸ್ ಗೂಢಚರ್ಯೆ’ ಪ್ರಧಾನಿ-ಗೃಹ ಸಚಿವ ರಾಜೀನಾಮೆಗೆ ಎಸ್ಡಿಪಿಐ ಆಗ್ರಹ

ಹೊಸದಿಲ್ಲಿ, ಜು.20: ಪೆಗಾಸಸ್ ಕಣ್ಗಾವಲು ತಂತ್ರಾಂಶ ಬಳಸಿ ಗಣ್ಯ ವ್ಯಕ್ತಿಗಳ ಗೂಢಚರ್ಯೆ ನಡೆಸಿರುವುದು ಆಘಾತಕಾರಿ ಹಾಗೂ ಅಕ್ಷಮ್ಯ. ಕೇಂದ್ರ ಬಿಜೆಪಿ ಸರಕಾರವು ಈ ದುಷ್ಟ ಕೃತ್ಯವನ್ನು ರೂಪಿಸಿದೆ ಎಂಬುದು ಬಹಿರಂಗಗೊಂಡಿದೆ. ಈ ಕೃತ್ಯ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಗಳಿಗೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಆಗ್ರಹಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ತನಿಖೆ ನಡೆಸಿದರೆ ಮಾತ್ರ ಈ ಪಿತೂರಿಗಳನ್ನು ಬಹಿರಂಗಪಡಿಸಲು ಮತ್ತು ಈ ಘೋರ ಅಪರಾಧದಿಂದ ಉಂಟಾದ ಹಾನಿಯನ್ನು ಕಂಡುಹಿಡಿಯಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಇಸ್ರೇಲಿ ತಂತ್ರಜ್ಞಾನ ಕಂಪನಿಯಾದ ಎನ್.ಎಸ್.ಒ ಗ್ರೂಪ್, ಈ ಪೆಗಾಸಸ್ ಸ್ಪೈವೇರ್ ಅನ್ನು ಅಭಿವೃದ್ಧಿಪಡಿಸಿದೆ. 2017ರಿಂದ ಭಾರತೀಯ ಪತ್ರಕರ್ತರು, ರಾಜತಾಂತ್ರಿಕರು, ಸಾಂವಿಧಾನಿಕ ಗಣ್ಯರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಎನ್.ಜಿ.ಒ ಗಳು ಮುಂತಾದ ನೂರಾರು ಗಣ್ಯರ ಮೊಬೈಲ್ ಫೋನ್ಗಳ ಮೇಲೆ ಈ ತಂತ್ರಾಂಶದ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ಅವರು ಹೇಳಿದ್ದಾರೆ.
ಗುರಿಯಾಗಿಸಲ್ಪಟ್ಟ ವ್ಯಕ್ತಿಗಳ ಪಾಸ್ ವರ್ಡ್ಗಳು, ಕಾಂಟ್ಯಾಕ್ಟ್ ಗಳು, ಕ್ಯಾಲೆಂಡರ್ ಈವೆಂಟ್ ಗಳು, ಪಠ್ಯ ರೂಪದ ಸಂದೇಶಗಳು ಮತ್ತು ಲೈವ್ ಧ್ವನಿ ಕರೆಗಳು ಸೇರಿದಂತೆ ಖಾಸಗಿ ಡೇಟಾವನ್ನು ಇದು ಸಂಗ್ರಹಿಸಿದೆ. ಪೆಗಾಸಸ್ ಸ್ಪೈವೇರ್ ಫೋನ್ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ನಿಯಂತ್ರಿಸುತ್ತದೆ ಮತ್ತು ಉದ್ದೇಶಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಜಿ.ಪಿ.ಎಸ್ ಅನ್ನು ಬಳಸುತ್ತದೆ ಎಂದು ಫೈಝಿ ತಿಳಿಸಿದ್ದಾರೆ.
ಈ ಪೆಗಾಸಸ್ ಸ್ಪೈವೇರ್ನ ಅಪಾಯಕಾರಿ ಅಂಶವೆಂದರೆ, ಈ ಸ್ಪೈವೇರ್ ಇಮೇಲ್, ಮಿಸ್ ಕಾಲ್ ಅಥವಾ ಸಂದೇಶಗಳನ್ನು ಕಳುಹಿಸುವ ಮೂಲಕ ಯಾರ ಮೊಬೈಲ್ ಫೋನ್ ಒಳಗೂ ನುಸುಳಬಹುದು, ಇದಕ್ಕಾಗಿ ಉದ್ದೇಶಿತ ವ್ಯಕ್ತಿಯು ಅದರ ಮೇಲೆ ಕ್ಲಿಕ್ ಮಾಡಬೇಕಾಗಿಲ್ಲ(ಝೀರೋ ಕ್ಲಿಕ್). 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ಗೆ ಭೇಟಿಯ ನಂತರ ಈ ಗೂಢಚರ್ಯೆ ಪ್ರಾರಂಭವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಗೂಢಾಚಾರ ತಂತ್ರಾಂಶವನ್ನು "ಕೇವಲ ಕಾನೂನು ಜಾರಿ ಸಂಸ್ಥೆಗಳು ಮತ್ತು ಸರಕಾರಗಳ ಗುಪ್ತಚರ ಸಂಸ್ಥೆಗಳಿಗೆ" ಮಾತ್ರ ಮಾರಾಟ ಮಾಡಲಾಗಿದೆ ಎಂದು ಎನ್.ಎಸ್.ಒ ಗ್ರೂಪ್ ಸ್ಪಷ್ಟಪಡಿಸಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರವು ಈ ಸ್ನೂಪ್ ಗೇಟ್ ಅನ್ನು ಉದ್ದೇಶಿತ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಮತ್ತು ಚಟುವಟಿಕೆಗಳ ವಿವರಗಳನ್ನು ಸಂಗ್ರಹಿಸಲು, ಅವರನ್ನು ಗುರಿಯಾಗಿಸುವ ಉದ್ದೇಶದಿಂದ ಇದನ್ನು ಬಳಸಲಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಫೈಝಿ ತಿಳಿಸಿದ್ದಾರೆ.
ಉದ್ದೇಶಿತ ವ್ಯಕ್ತಿಯು ರಾಷ್ಟ್ರದ ಭದ್ರತೆಗೆ ಬೆದರಿಕೆಯೆಂದು ತೋರದ ಹೊರತು ಈ ದೇಶದ ಯಾವುದೇ ನಾಗರಿಕರ ಗೌಪ್ಯತೆಯನ್ನು ಹ್ಯಾಕ್ ಮಾಡಲು ಯಾವುದೇ ವ್ಯಕ್ತಿ ಅಥವಾ ಶಾಸನಬದ್ಧ ಸಂಸ್ಥೆಗೆ ಯಾವುದೇ ಹಕ್ಕುಗಳು ಇಲ್ಲ. ಆದಾಗ್ಯೂ, ಕೇಂದ್ರ ಸರಕಾರವು ಇಂತಹ ದುಷ್ಟ ಕೆಲಸಗಳಿಗೆ ಇದನ್ನು ಬಳಸಿದ್ದು, 'ರಾಷ್ಟ್ರೀಯ ಭದ್ರತೆ'ಯ ಹೆಸರಿನಲ್ಲಿ ನಡೆಸಿದ ಈ ಭೀಕರ ಅಪರಾಧವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಫೈಝಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಈ 'ಸ್ನೂಪ್ ಗೇಟ್'ನ ಹಿಂದಿನ ಮಿದುಳುಗಳು. ಆದುದರಿಂದ, ಇವರಿಬ್ಬರಿಗೂ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕುಗಳಿಲ್ಲ. ಈ ಘಟನೆಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಜೆ.ಪಿ.ಸಿ (ಜಂಟಿ ಸಂಸದೀಯ ಸಮಿತಿ) ಯಿಂದ ತನಿಖೆ ನಡೆಸಬೇಕು ಮತ್ತು ಘಟನೆಯ ಪಾರದರ್ಶಕ ತನಿಖೆಗಾಗಿ ಅವರಿಬ್ಬರೂ ತಕ್ಷಣ ರಾಜೀನಾಮೆ ನೀಡಬೇಕೆಂದು ಫೈಝಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







