ಮಂಗಳೂರು : ಭಜನಾ ಮಂದಿರಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಕಳವು
ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು : ನೀರುಮಾಗ ಜಂಕ್ಷನ್ ಸಮೀಪದಲ್ಲೇ ಇರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ದುಷ್ಕರ್ಮಿಗಳು ಕಾಣಿಕೆ ಡಬ್ಬಿ ಕಳವು ಮಾಡಿದ ಘಟನೆ ಬುಧವಾರ ನಡೆದಿದೆ.
ಭಜನಾ ಮಂದಿರಕ್ಕೆ ಪ್ರವೇಶಿಸಿದ ಇಬ್ಬರು ದುಷ್ಕರ್ಮಿಗಳು ಪ್ರಧಾನ ಗುಡಿಯ ಮುಂಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ 3500 ರೂ. ಅಧಿಕ ಹಣ ಇತ್ತೆಂದು ತಿಳಿದು ಬಂದಿದೆ.
ದುಷ್ಕರ್ಮಿಗಳ ಚಲನವಲನಗಳ ಸುಮಾರು 45 ನಿಮಿಷಗಳ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಗೆಸ್ಟ್ ಹೌಸ್ ನಲ್ಲಿರುವ ಕೆಲವು ಅಮೂಲ್ಯ ಸೊತ್ತುಗಳಿಗೆ ಹಾನಿ ಎಸಗಿದ್ದು, ಗೆಸ್ಟ್ ಹೌಸ್ ನಲ್ಲಿ ಕುಳಿತು ದೂಮಪಾನ, ಮದ್ಯ ಸೇವನೆ ಮಾಡಿರುವ ಬಗ್ಗೆ ಕೆಲವೊಂದು ಕುರುಹುಗಳು ಪತ್ತೆಯಾಗಿವೆ ಎಂದು ದೂರಲಾಗಿದೆ.
ಪೊಲೀಸರಿಂದ ಪರಿಶೀಲನೆ: ಕಳವು ಕೃತ್ಯದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಜಾನ್ಸನ್ ಮತ್ತು ಸಿಬ್ಬಂದಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದೆ. ಸಿಸಿಟಿವಿ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.