ಯಡಿಯೂರಪ್ಪಗೆ ಬೆಂಬಲಿಸಿ ಹೇಳಿಕೆ: ಮಠಾಧೀಶರ ನಡೆ ಸರಿಯಲ್ಲ; ಮಾಜಿ ಸಚಿವ ರಾಯರೆಡ್ಡಿ

ಹೊಸದಿಲ್ಲಿ, ಜು. 22: `ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಮಠಾಧೀಶರ ನಡೆ ಸರಿಯಲ್ಲ. ಅರಿಷಡ್ವರ್ಗಗಳನ್ನು ಜಯಿಸಿದ್ದಾರೆಂಬ ಕಾರಣಕ್ಕೆ ಎಲ್ಲ ಸಮುದಾಯಗಳ ಮಠಾಧೀಶರಿಗೆ ಎಲ್ಲ ಸಮುದಾಯಗಳಿಗೆ ಸೇರಿದ ಜನರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಭಕ್ತರು ಕಾಲಿಗೆ ಬೀಳುತ್ತಾರೆ. ಆದರೆ, ಮಠಾಧೀಶರು ಒಂದು ಪಕ್ಷದ ಮುಖಂಡರನ್ನು ಬೆಂಬಲಿಸುವುದು ಸಲ್ಲ' ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆಕ್ಷೇಪಿಸಿದ್ದಾರೆ.
ಗುರುವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಂವಿಧಾನದಲ್ಲಿ ಕಾಯಾರ್ಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಪ್ರಮುಖ ಅಂಗಗಳಾದರೂ, ಜನತೆಯೆದುರು ಸತ್ಯ ಹೊರಗಿಡುವ ಪತ್ರಿಕಾ ರಂಗವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಅದರ ಜೊತೆಗೆ ಈಗ ರಾಜಕಾರಣಿಗಳು ಸ್ವಾಮೀಜಿಗಳಿಗೆ ಹಾಕುವ `ಸಾಷ್ಟಾಂಗ'ವೂ ಸೇರಿದೆ. `ಸಾಷ್ಟಾಂಗ' ಹಾಕುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಪರಿಪಾಠ ನಡೆದಿದೆ' ಎಂದು ವ್ಯಂಗ್ಯವಾಡಿದರು.
ಹಿರಿಯರ ನಡೆ ಸರಿಯಲ್ಲ: ಕಾಂಗ್ರೆಸ್ ಪಕ್ಷದ ಹಿರಿಯ ಶಾಮನೂರು ಶಿವಶಂಕರಪ್ಪ ಹಾಗೂ ಶಾಸಕ ಎಂ.ಬಿ.ಪಾಟೀಲ್ ಅವರು ಲಿಂಗಾಯತರು ಎಂಬ ಕಾರಣದಿಂದ ಯಡಿಯೂರಪ್ಪ ಅವರಿಗೆ ಬಹಿರಂಗ ಬೆಂಬಲ ನೀಡಿರುವುದು ಸರಿಯಲ್ಲ. ಒಂದು ಪಕ್ಷದ ತತ್ವ, ಸಿದ್ಧಾಂತಕ್ಕೆ ಒಳಪಟ್ಟ ಈ ಶಾಸಕರು, ಸಿದ್ಧಾಂತ, ಶಿಸ್ತು ಇಲ್ಲದ ಇನ್ನೊಂದು ಪಕ್ಷದ ಮುಖಂಡರ ಬೆಂಬಲಕ್ಕೆ ನಿಲ್ಲುವುದು ಎಷ್ಟು ಸೂಕ್ತ? ಎಂದು ಅವರು ಪ್ರಶ್ನಿಸಿದರು.





