ಮಹಾರಾಷ್ಟ್ರ: ಭೂಕುಸಿತದಿಂದ 36 ಮಂದಿ ಮೃತ್ಯು
ಜುಲೈನಲ್ಲಿ 40 ವರ್ಷಗಳ ಬಳಿಕ ಅತ್ಯಧಿಕ ಮಳೆ

ಸಾಂದರ್ಭಿಕ ಚಿತ್ರ
ಮುಂಬೈ: ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ 36 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಕೊಂಕಣ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಸಾವಿರಾರು ಜನರು ಪ್ರವಾಹ ಹಾಗೂ ಭೂಕುಸಿತದಲ್ಲಿ ಸಿಲುಕಿದ್ದಾರೆ. ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ರಾಯ್ಗಡದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ.
ಪ್ರವಾಹದಿಂದ ಸಿಕ್ಕಿಬಿದ್ದವರು ಮನೆಯ ಮೇಲ್ಛಾವಣಿ ಅಥವಾ ಎತ್ತರದ ಪ್ರದೇಶಕ್ಕೆ ಹೋಗುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ. ಅಲ್ಲಿ ಹೆಲಿಕಾಪ್ಟರ್ಗಳಲ್ಲಿರುವ ರಕ್ಷಣಾ ತಂಡಗಳು ಗುರುತಿಸಿ ಸ್ಥಳಾಂತರಿಸಬಹುದು ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ 40 ವರ್ಷಗಳಲ್ಲಿ ಮೊದಲ ಬಾರಿ ಜುಲೈನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ.
ನಿನ್ನೆ ಸಂಭವಿಸಿದ ಮೂರು ಭೂಕುಸಿತಗಳಲ್ಲಿ ಈ ಸಾವುಗಳು ಸಂಭವಿಸಿದ್ದು, ಒಂದು ಸ್ಥಳದಲ್ಲಿ 32 ಮೃತದೇಹಗಳು ಹಾಗೂ ಇನ್ನೊಂದು ಸ್ಥಳದಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ಪರಿಸ್ಥಿತಿಯ ಮೇಲೆ ನಿಗಾ ಇರಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದರು.





