ಮುಲ್ಕಿ ಶಾಫಿ ಮಸೀದಿ ವಠಾರದಲ್ಲಿ ಸಿಕ್ಕಿದ ಚಿನ್ನಾಭರಣ: ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೂ ವ್ಯಾಪಾರಿ
![ಮುಲ್ಕಿ ಶಾಫಿ ಮಸೀದಿ ವಠಾರದಲ್ಲಿ ಸಿಕ್ಕಿದ ಚಿನ್ನಾಭರಣ: ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೂ ವ್ಯಾಪಾರಿ ಮುಲ್ಕಿ ಶಾಫಿ ಮಸೀದಿ ವಠಾರದಲ್ಲಿ ಸಿಕ್ಕಿದ ಚಿನ್ನಾಭರಣ: ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೂ ವ್ಯಾಪಾರಿ](https://www.varthabharati.in/sites/default/files/images/articles/2021/07/23/299910-1627039019.jpeg)
ಮಂಗಳೂರು, ಜು. 23: ಮುಲ್ಕಿಯ ಕೇಂದ್ರ ಶಾಫಿ ಜುಮಾ ಮಸೀದಿಯ ವಠಾರದಲ್ಲಿ ಸಿಕ್ಕಿದ 8 ಪವನು ತೂಕದ ಚಿನ್ನದ ಸರವನ್ನು ವಾರಸುದಾರರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಾಟಿಪಳ್ಳ-ಕೃಷ್ಣಾಪುರ ಮೂಲದ ಕುಟುಂಬವೊಂದು ಪ್ರಯಾಣದ ವೇಳೆ ಜುಮಾ ನಮಾಝಿಗಾಗಿ ಮುಲ್ಕಿಯ ಶಾಫಿ ಮಸೀದಿಗೆ ತೆರಳಿದ್ದರು. ಕುಟುಂಬದ ಮಹಿಳಾಯರು ಮಸೀದಿಯ ಹೊರಗಡೆ ನಿಂತಿದ್ದು, ಈ ಸಂದರ್ಭ ಸುಮಾರು 8 ಪವನು ತೂಕದ ಚಿನ್ನದ ಸರ ತುಂಡಾಗಿ ಬಿದ್ದುದು ಮಹಿಳೆಯ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ನಮಾಝ್ ಮುಗಿಸಿದ ಬಳಿಕ ಆ ಕುಟುಂಬವು ಮನೆಗೆ ಮರಳಿತ್ತು.
ಅದೇ ಮಸೀದಿಯಲ್ಲಿ ನಮಾಝ್ ಮಗಿಸಿ ಮನೆಗೆ ತೆರಳುತ್ತಿದ್ದ ಮುಲ್ಕಿಯ ಹೂವಿನ ವ್ಯಾಪಾರಿ ಉಮರುಲ್ ಫಾರೂಕ್ ಅವರಿಗೆ ಈ ಚಿನ್ನದ ಸರ ಸಿಕ್ಕಿತ್ತು. ತಕ್ಷಣ ಅವರು ಖತೀಬ್ ಎಸ್ ಬಿ ಮುಹಮ್ಮದ್ ದಾರಿಮಿ ಅವರಿಗೆ ಒಪ್ಪಿಸಿದ್ದರು.
ಈ ಮಧ್ಯೆ ಮನೆಗೆ ಮರಳಿದ ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಇಲ್ಲದಿರುವುದು ಮಹಿಳೆಯ ಗಮನಕ್ಕೆ ಬಂದಿದೆ. ಗಾಬರಿಗೊಂಡ ಅವರು ಮನೆಯವರೊಂದಿಗೆ ಮುಲ್ಕಿಯ ಮಸೀದಿಯ ವಠಾರಕ್ಕೆ ತೆರಳಿ ಹುಡುಕಾಟ ಆರಂಭಿಸಿದ್ದರು. ಹಾಗೇ ಮಸೀದಿಯಲ್ಲಿದ್ದವರ ಬಳಿ ವಿಷಯ ತಿಳಿಸಿದ್ದರು. ಅದರಂತೆ ಖತೀಬ್ ಎಸ್ ಬಿ ದಾರಿಮಿ ಮತ್ತಿತರರು ವಾರಸುದಾರರಿಗೆ ಚಿನ್ನದ ಸರ ಹಸ್ತಾಂತರಿಸಿ ದ್ದಾರೆ. ಹೂ ವ್ಯಾಪಾರಿ ಉಮರುಲ್ ಫಾರೂಕ್ರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.