ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ವಶಿಷ್ಟಿ ನದಿ: ದಿನದ ಮುಂಬೈ-ಮಂಗಳೂರು ರೈಲು ಸಂಚಾರ ರದ್ದು
![ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ವಶಿಷ್ಟಿ ನದಿ: ದಿನದ ಮುಂಬೈ-ಮಂಗಳೂರು ರೈಲು ಸಂಚಾರ ರದ್ದು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ವಶಿಷ್ಟಿ ನದಿ: ದಿನದ ಮುಂಬೈ-ಮಂಗಳೂರು ರೈಲು ಸಂಚಾರ ರದ್ದು](https://www.varthabharati.in/sites/default/files/images/articles/2021/07/23/299933-1627049532.jpg)
ಉಡುಪಿ, ಜು.23: ಮಹಾರಾಷ್ಟ್ರದಾದ್ಯಂತ ಮುಂದುವರಿದ ಮಳೆಯಿಂದಾಗಿ ರತ್ನಗಿರಿ ಜಿಲ್ಲೆಯ ಚಿಪ್ಳೂಣ್ ಹಾಗೂ ಕಮತೆ ರೈಲು ನಿಲ್ದಾಣಗಳ ನಡುವಿನ ವಶಿಷ್ಟಿ ನದಿ ಈಗಲೂ ಅಪಾಯ ಮಟ್ಟ ಮೀರಿ ಹರಿಯುತಿದ್ದು, ಪ್ರಯಾಣಿಕ ಸುರಕ್ಷತೆಯ ದೃಷ್ಟಿಯಿಂದ ಕೊಂಕಣ ರೈಲು ಮಾರ್ಗದಲ್ಲಿ ದಕ್ಷಿಣಕ್ಕೆ ಸಂಚರಿಸುವ ಹೆಚ್ಚಿನ ರೈಲುಗಳ ಪ್ರಯಾಣವನ್ನು ಇಂದು ಸಂಪೂರ್ಣ ರದ್ದುಗೊಳಿಸಲಾ ಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಇನ್ನು ಕೆಲವು ದೂರದ ಪ್ರಯಾಣದ ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಿಲಾಗಿದೆ ಹಾಗೂ ಕೆಲವು ರೈಲುಗಳು ವಿಳಂಬ ವಾಗಿ ಸಂಚರಿಸುತ್ತಿವೆ ಎಂದೂ ಇಂದು ಸಂಜೆ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ನಂ.02620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ದೈನಂದಿನ ವಿಶೇಷ ರೈಲಿನ ಇಂದಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ರೈಲು ನಂ.01134 ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್ಎಂಟಿ ದೈನಂದಿನ ವಿಶೇಷ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.
ಅಲ್ಲದೇ ಇಂದಿನ ರೈಲು ನಂ.02619 ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ಹಾಗೂ ರೈಲು ನಂ.01133 ಮುಂಬೈ ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ದೈನಂದಿನ ವಿಶೇಷ ರೈಲಿನ ದಿನದ ಸಂಚಾರವನ್ನು ಸಹ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಗುರುವಾರ ಮಂಗಳೂರಿನಿಂದ ತೆರಳಿದ್ದ ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ವಿಶೇಷ ರೈಲಿನಲ್ಲಿ ಮುಂಬೈಗೆ ತೆರಳುತಿದ್ದ ಪ್ರಯಾಣಿಕರನ್ನು, ಮಂಗಳೂರು ಜಂಕ್ಷನ್- ಮುಂಬೈ ಸಿಎಸ್ಎಂಟಿ ರೈಲಿನಲ್ಲಿ ಮುಂಬೈಗೆ ಕಳುಹಿಸಿಕೊಡಲಾಗಿದೆ. ಈ ರೈಲು ಮಡಗಾಂವ್ ಜಂಕ್ಷನ್ನಿಂದ ಲೊಂಡಾ ಜಂಕ್ಷನ್, ಮೀರಜ್ ಜಂಕ್ಷನ್, ಪುಣೆ ಜಂಕ್ಷನ್ ಹಾಗೂ ಪನ್ವೇಲ್ ಮಾರ್ಗವಾಗಿ ಮುಂಬೈಯಿಗೆ ತೆರಳಿದೆ.
ಶುಕ್ರವಾರದ ತಿರುವನಂತಪುರಂ ಸೆಂಟ್ರಲ್- ಲೋಕಮಾನ್ಯ ತಿಲಕ್ ‘ನೇತ್ರಾವತಿ’ ದೈನಂದಿನ ರೈಲಿನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಸಂಚಾರ ಪ್ರಾರಂಭಿಸಿದ್ದ ಕೋಚುವೇಲಿ-ಲೋಕಮಾನ್ಯ ತಿಲಕ್ ರೈಲಿನ ಪ್ರಯಾಣಿಕರನ್ನು ಮಡಗಾಂವ್ನಲ್ಲಿ ಮಾರ್ಗ ಬದಲಿಸಿ ಲೋಂಡಾ ಜಂಕ್ಷನ್, ಮೀರಜ್ ಜಂಕ್ಷನ್, ಪುಣೆ, ಪನ್ವೇಲ್ ಮಾರ್ಗವಾಗಿ ಸಂಚರಿಸಿದ ತಿರುವನಂತಪುರಂ- ಲೋಕಮಾನ್ಯ ತಿಲಕ್ ರೈಲಿನಲ್ಲಿ ಮುಂಬೈಗೆ ಕಳುಹಿಸಿಕೊಡಲಾಗಿದೆ.
ಗುರುವಾರ ಪ್ರಯಾಣ ಪ್ರಾರಂಭಿಸಿದ್ದ ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಜಂಕ್ಷನ್- ಮುಂಬೈ ಸಿಎಸ್ಎಂಟಿ ದೈನಂದಿನ ರೈಲಿನ ಪ್ರಯಾಣವನ್ನು ಮಡಗಾಂವ್ ಹಾಗೂ ಪನ್ವೇಲ್ ನಡುವೆ ರದ್ದುಗೊಳಿಸಲಾಗಿದೆ. ಈ ಎರಡು ರೈಲುಗಳ ಮುಂಬೈ ಯಿಂದ ಮಂಗಳೂರಿನ ಗುರುವಾರದ ಪ್ರಯಾಣವನ್ನು ರದ್ದುಪಡಿಸಲಾಗಿತ್ತು.
ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಮುಂಬೈ ಹಾಗೂ ಉತ್ತರ ಭಾರತದ ವಿವಿದೆಡೆಗಳಿಗೆ ತೆರಳುವ ರೈಲುಗಳ ಮಾರ್ಗವನ್ನು ಅರ್ಧದಲ್ಲೇ ಬದಲಿಸಲಾಗಿದೆ. ತಿರುನಲ್ವೇಲಿ-ಗಾಂಧಿಧಾಮ ಸಾಪ್ತಾಹಿಕ ರೈಲನ್ನು ಪಡೀಲಿನಿಂದ ಹಾಸನ ಜಂಕ್ಷನ್, ಅರಸಿಕೆರೆ ಜಂಕ್ಷನ್, ಹುಬ್ಬಳ್ಳಿ, ಮೀರಜ್ ಜಂಕ್ಷನ್, ಪುಣೆ ಜಂಕ್ಷನ್, ಪನ್ವೇಲ್ ಮಾರ್ಗವಾಗಿ ಕಳುಹಿಸಿಕೊಡಲಾಗಿ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.