ಸಿದ್ಧಾಪುರ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಮಂಜುನಾಥ್ ಪೂಜಾರಿ ಆರೋಪ
![ಸಿದ್ಧಾಪುರ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಮಂಜುನಾಥ್ ಪೂಜಾರಿ ಆರೋಪ ಸಿದ್ಧಾಪುರ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಮಂಜುನಾಥ್ ಪೂಜಾರಿ ಆರೋಪ](https://www.varthabharati.in/sites/default/files/images/articles/2021/07/23/299940-1627050824.jpg)
ಕುಂದಾಪುರ : ಸಿದ್ಧಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಉಡುಪಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಈ ಕುರಿತು ಮಾಹಿತಿ ನೀಡಲು ಅವಕಾಶ ಇಲ್ಲ ಎಂಬುದಾಗಿ ಹಿಂಬರಹ ನೀಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಬಿ.ಟಿ.ಮಂಜುನಾಥ್ ಪೂಜಾರಿ ಆರೋಪಿಸಿದ್ದಾರೆ.
ಕುಂದಾಪುರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವವ್ಯಹಾರದ ಬಗ್ಗೆ 2019ರ ಮಾ.29ರಂದು ಕುಂದಾಪುರ ಸಹಾಯಕ ಪೋಲಿಸ್ ಅಧೀಕ್ಷಕರು, ಮುಖ್ಯಮಂತ್ರಿ ಹಾಗೂ ಸಹಕಾರಿ ಸಚಿವ ರಿಗೂ ದೂರು ನೀಡಿದ್ದು ಯಾರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ದೂರು ಸ್ವೀಕರಿಸಿರುವ ಲೋಕಾಯುಕ್ತ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ ಎಂದು ದೂರಿದರು.
ಈ ಸಂಘದಲ್ಲಿ ಸುಮಾರು 30 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿ ರುವುದು ಲೆಕ್ಕ ಪರಿಶೋಧನೆ(ಆಡಿಟ್) ತನಿಖೆಯಲ್ಲಿ ಕಂಡು ಬಂದಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈವರೆಗೆ ಅಧಿಕೃತ ಲೆಕ್ಕಪರಿಶೋಧಕ ರನ್ನು ನೇಮಿಸದೇ ಇರುವುದನ್ನು ನೋಡಿದರೆ ಈ ಪ್ರಕರಣದಲ್ಲಿ ಎಲ್ಲರೂ ಭಾಗಿಯಾಗಿರುವುದು ಕಂಡುಬರುತ್ತದೆ.
ಈ ಪ್ರಕರಣದ ತನಿಖೆ ನಡೆಸುವಂತೆ 2020ರ ಎ.5ರಂದು ಜಾರಿ ನಿರ್ದೇಶನಾ ಲಯಕ್ಕೆ ದೂರು ನೀಡಿದ್ದು ಈ ತನಿಖೆಯ ಹೊರತು ಬೇರೆ ಯಾವುದೇ ತನಿಖೆ ಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಆದುದರಿಂದ ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಧಾನ ಸೌದದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದಿವಾಕರ ಹೆಗ್ಡೆ, ಸುಧಾಕರ್ ಶೆಟ್ಟಿ, ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು.