ಕಲ್ಲಾಪು: 'ಗ್ಲೋಬಲ್ ಕಮರ್ಷಿಯಲ್ ಸೆಂಟರ್' ಮಾರುಕಟ್ಟೆ ಉದ್ಘಾಟನೆ
![ಕಲ್ಲಾಪು: ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಮಾರುಕಟ್ಟೆ ಉದ್ಘಾಟನೆ ಕಲ್ಲಾಪು: ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಮಾರುಕಟ್ಟೆ ಉದ್ಘಾಟನೆ](https://www.varthabharati.in/sites/default/files/images/articles/2021/07/24/300074-1627135514.jpg)
ಮಂಗಳೂರು : ರೈತರಿಗೆ, ಜನಸಾಮಾನ್ಯರಿಗೆ ಅನುಕೂಲವಾದ ವಿಶ್ವಕ್ಕೆ ಮಾದರಿಯಾದ ವಿಶೇಷ ಮಾರುಕಟ್ಟೆಯಾಗಿ ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಅಭಿವೃದ್ಧಿ ಹೊಂದಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕಲ್ಲಾಪು ರಾಷ್ಟ್ರೀಯ ಹೆದ್ದಾರಿ 66 ಬಳಿ ನಿರ್ಮಿಸಲಾದ ಗೋಬಲ್ ಕಮರ್ಷಿಯಲ್ ಸೆಂಟರ್ ಸಗಟು ಮಳಿಗೆಯ ವಿಭಾಗವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಕಾರ ಜನರ ನೆರವಿಗಾಗಿ ಇರುವುದು. ಕೋವಿಡ್ ಸಂದರ್ಭದಲ್ಲಿ ಏಕಾಏಕಿ ಸೆಂಟ್ರಲ್ ಮಾರುಕಟ್ಟೆ ಮುಚ್ಚಿದಾಗ ಅತಂತ್ರರಾದ ಸಂದರ್ಭದಲ್ಲಿ ವ್ಯಾಪಾರಸ್ಥರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ದೇಶಕ್ಕೆ ಮಾದರಿಯಾದ ಮಾರುಕಟ್ಟೆ ತಲೆ ಎತ್ತಿ ನಿಂತಿದೆ. ಇಲ್ಲಿ ಸುಮಾರು 6 ಟನ್ ತ್ಯಾಜ್ಯ ಸಂಸ್ಕರಿಸಿ ಮಾರಾಟ ಮಾಡುವ ಘಟಕ, ರೈತ ಭವನವನ್ನು ನಿರ್ಮಿಸಿರುವುದು, ಕಾರ್ಮಿಕರಿಗೆ ವಿಶೇಷ ಸೌಲಭ್ಯ ನಿರ್ಮಿಸಿರುವ ಮೂಲಕ ಮಾದರಿ ಮಾರುಕಟ್ಟೆಯಾಗಿದೆ. ಮುಂದೆ ಸಹಕಾರಿ ಸಂಘಗಳನ್ನು ಆರಂಭಿಸುವಂತಾ ಗಲಿ ಎಂದು ಶಾಸಕ ಯು.ಟಿ.ಖಾದರ್ ಶುಭ ಹಾರೈಸಿದರು.
ಸಮಾರಂಭದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್ ರೈತ ಭವನವನ್ನು ಉದ್ಘಾಟಿಸಿದರು, ಮಾಜಿ ಶಾಸಕ ಐವನ್ ಡಿಸೋಜ ಚಿಲ್ಲರೆ ಮರಾಟ ವಿಭಾಗವನ್ನು ಉದ್ಘಾಟಿಸಿದರು. ಉಳ್ಳಾಲ ಪುರಸಭೆಯ ಅಧ್ಯಕ್ಷೆ ಚಿತ್ರಕಲಾ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು.
ಶಾಸಕ ಹರೀಶ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮೊಹಿಯುದ್ದೀನ್ ಬಾವ, ಜಾಗದ ಮಾಲಕರಾದ ಪಿ.ಇಸ್ಮಾಯಿಲ್ (ಎಚ್ ಎನ್ ಜಿ ಸಿ), ಮೊಹಿಯುದ್ದೀನ್, ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಪ್ರವರ್ತಕರು ಮತ್ತು ಆಡಳಿತ ನಿರ್ದೇಶಕ ಅಬೂಬಕ್ಕರ್ ಸಿದ್ಧಿಕ್, ನಿರ್ದೇಶಕರಾದ ಎ.ಜೆ.ಶೇಖರ್, ಮೊಹಮ್ಮದ್ ಬಾವ, ಹಮೀದ್, ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷರು ಚಂದ್ರಹಾಸ ಪಂಡಿತ್ ಹೌಸ್, ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೈಯದ್ ಬ್ಯಾರಿ, ಅನಿವಾಸಿ ಉದ್ಯಮಿ ಶೇಖ್ ಕರ್ನಿರೆ, ಉದ್ಯಮಿ ಶರೀಫ್, ಅಥಾವುಲ್ಲಾ ಜೊಕಟ್ಟೆ, ರಿಯಾಝ್ ಫರಂಗೀಪೇಟೆ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಾಹೆಲ್ ಝಾಹೀರ್ ಮತ್ತು ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಾಂಟ್ರಾಕ್ಟ್ ದಾರರಾದ ಹುಸೈನ್, ವಿನ್ಯಾಸಕಾರ ಅಬ್ದುಲ್ ಜಲೀಲ್, ಇಲೆಕ್ಟ್ರಿಕ್ ಗುತ್ತಿಗೆದಾರ ರಮೇಶ್ ಹಾಗೂ ಗ್ಲೋಬಲ್ ಕಮರ್ಷಿಯಲ್ ಸೆಂಟರ್ ನ ಆಡಳಿತ ನಿರ್ದೇಶಕ ಅಬೂಬಕ್ಕರ್ ಸಿದ್ಧಿಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಹಮ್ಮದ್ ಸ್ವಾಗತಿಸಿ, ಅಶ್ಫಾಕ್ ವಂದಿಸಿದರು.
ಗ್ಲೋಬಲ್ ಕಮರ್ಶಿಯಲ್ ಸೆಂಟರ್ ವಿಶೇಷತೆ
ಕಲ್ಲಾಪು ಪ್ರದೇಶದ ರಾಷ್ಟ್ರೀಯ ಹೆದ್ದಾರಿ66 ಪಕ್ಕ ಒಟ್ಟು ಸುಮಾರು ಐದು ಎಕರೆ ವಿಶಾಲ ಪ್ರದೇಶದಲ್ಲಿ 1.5 ಎಕರೆ ಪ್ರದೇಶವನ್ನು ವ್ಯಾಪಾರೋದ್ಯಮಕ್ಕೆ ಬಳಸಲಾಗಿದೆ. ಅದರಲ್ಲಿ 24x7 ತಾತ್ಕಾಲಿಕ ಶೆಡ್ ರೂಪದ ಅಂಗಡಿ ಮಳಿಗೆಗ ಳನ್ನು ನಿರ್ಮಿಸಿದ್ದು, ಹೊರ ಆವರಣದಲ್ಲಿ ರಖಂ ಮತ್ತು ಒಳಾಂಗಣದಲ್ಲಿ ಚಿಲ್ಲರೆ ಅಂಗಡಿಗಳನ್ನು ನಿರ್ಮಿಸಲಾಗಿದೆ. ಉಳಿದ ಭಾಗವನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ಗೆ ಬಳಸಿಕೊಳ್ಳಲಾಗುತ್ತಿದೆ.
ಈ ವಿಶಿಷ್ಟ ಮಾರುಕಟ್ಟೆಯಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯ ನಿರ್ಮಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಸಿಸಿಕ್ಯಾಮರಾ, ಎಂಟು ಮಂದಿ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಮಳಿಗೆಗೂ ವಿದ್ಯುತ್ ದೀಪ, ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ನೆಲಕ್ಕೆ ಇಂಟರ್ಲಾಕ್ ಅಳವಡಿಸಲಾಗಿದೆ. ಎಟಿಎಂ ಸಹಿತ ಬ್ಯಾಂಕಿಂಗ್ ವ್ಯವಸ್ಥೆಗಾಗಿ ಬ್ಯಾಂಕ್ ಜತೆ ಮಾತುಕತೆ ನಡೆಸಲಾಗಿದೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಿರ್ಮಾಣವಾಗಿರುವ ಈ ಮಾರುಕಟ್ಟೆ ಹಣ್ಣು, ತರಕಾರಿಗೆ ಸಂಬಂಧಿಸಿದ ಚಿಲ್ಲರೆ, ರಖಂ ಮಾರುಕಟ್ಟೆಗಳಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಅಭಿವೃದ್ಧಿ ಹೊಂದುವ ವಿಶ್ವಾಸ ಹೊಂದಿರುವುದಾಗಿ ಪ್ರವರ್ತಕರು ತಿಳಿಸಿದ್ದಾರೆ.
ಈ ಮಾರುಕಟ್ಟೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿಕ ಆತ್ಮ ನಿರ್ಭರ್ ಯೋಜನೆಯಗೆ ಪೂರಕವಾದ ಮಾದರಿ ಯೋಜನೆಯಾಗಿದೆ. ಸ್ಥಳೀಯ ವ್ಯಾಪಾರಿಗಳು ಸೂಕ್ತ ಸ್ಥಳಾವಕಾಶದ ಕೊರತೆಯಿಂದ ವಿವಿಧ ಕಡೆ ಚಿಲ್ಲರೆ ರಖಂ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ವ್ಯಾಪಾರಿಗಳಿಗೆ ಕಲ್ಲಾಪುವಿನ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ಕೇವಲ ಮೂರು ತಿಂಗಳಲ್ಲಿ ನಿರ್ಮಾಣವಾ ಗಿದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.
ಸ್ಥಳದಲ್ಲೇ ಕಸ ಸಂಸ್ಕರಣೆಯ ಘಟಕ:- ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಯಾವುದೇ ಕಸವನ್ನು ಹೊರಗೆ ಹಾಕುವುದಿಲ್ಲ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ತ್ಯಾಜ್ಯ ಸಂಸ್ಕರಣಾ ಘಟಕ(ಎಸ್ಟಿಪಿ) ಗಳನ್ನು ನಿರ್ಮಿಸಲಾಗಿದೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಸುತ್ತ ಹಸಿರು ಗಿಡ ನೆಡುವ ಯೋಜನೆ ಹೊಂದಿದ್ದು, ಕೊಯಮತ್ತೂರಿನ ಸಂಸ್ಥೆಯ ಘಟಕ ತ್ಯಾಜ್ಯ ಸಂಸ್ಕರಣೆ ಯನ್ನು ಸ್ಥಳದಲ್ಲಿಯೇ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.