ಉಡುಪಿ ನಗರಸಭೆ ಎದುರು ಕೃತಕ ಜಲಾಶಯ: ಭೂ ಕುಸಿತದ ಭೀತಿ

ಉಡುಪಿ, ಜು.24: ನಗರದ ಕೆಎಂ ಮಾರ್ಗದಲ್ಲಿರುವ ನಗರಸಭೆ ಕಚೇರಿಯ ಎದುರಿನ ಸರಕಾರಿ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ತೆಗೆದಿರುವ ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ಇದರಿಂದ ಇದರ ಸುತ್ತ ಭೂಕುಸಿತ ಸಂಭವಿಸುವ ಆತಂಕ ಎದುರಾಗಿದೆ.
ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಾಜಿ ಆಬ್ದುಲ್ಲಾ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಸುಪರ್ಸ್ಪೆಶಾಲಿಟಿ ನಿರ್ಮಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ವಿಶಾಲವಾದ ಸ್ಥಳದಲ್ಲಿ ಸುಮಾರು ಅರವತ್ತು ಅಡಿ ಆಳದ ಗುಂಡಿಯನ್ನು ತೋಡಿಡಲಾಗಿದೆ.
ಆದರೆ ಈ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಕಾನೂನಿನ ತೊಡಕಿನ ಹಿನ್ನೆಲೆ ಯಲ್ಲಿ ತಡೆಯೊಡ್ಡಲಾಗಿತ್ತು. ಇದೀಗ ಈ ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ನೀರಿನ ಮಟ್ಟವು ಐವತ್ತು ಅಡಿಯ ಆಳದವೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಗುಂಡಿಯ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು, ಯಾವೊಂದು ರಕ್ಷಣೆಯ ನಿರ್ಮಾಣಗಳು ಮಾಡಿಲ್ಲ. ಗುಂಡಿಯ ಅಂಚಿನ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳು ಇವೆ. ಇಲ್ಲಿನ ಜೇಡಿ ಮಣ್ಣು ಮೆದುವಾಗಿರುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳದ ಸುತ್ತಲು ಎತ್ತರದವರೆಗೆ ತಗಡು ಸಿಟಿನ ಬೇಲಿ ಹಾಕಿರುವುದರಿಂದ, ಇಲ್ಲಿಯ ಸಮಸ್ಯೆ ಅಧಿಕಾರಿಗಳ ಸಾರ್ವಜನಿಕರ ಅರಿವಿಗೆ ಬಾರದೆ ಅಜ್ಞಾತ ವಾಗಿದೆ. ಪರಿಸರದಲ್ಲಿ ಆತಂಕ ಮನೆಮಾಡಿದೆ. ತುರ್ತಾಗಿ ಜಿಲ್ಲಾಡಳಿತ, ನಗರಸಭೆ, ಅಪಾಯ ಆಹ್ವಾನಿಸುವ ಈ ಸ್ಥಳವನ್ನು, ಭೂ ವಿಜ್ಞಾನಿ- ಭೂಗರ್ಭ ಶಾಸ್ತ್ರಜ್ಞರ ಮೂಲಕ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.







