ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ಸವಾಲು

ಬೆಂಗಳೂರು, ಜು. 25: `ರಾಜ್ಯದ ಜನ ನೆರೆ, ಕೋವಿಡ್ನಿಂದ ತತ್ತರಿಸಿ ಜೀವ ಹಾಗೂ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ರಕ್ಷಣೆ ಮಾಡಲು ಸರಕಾರ ವಿಫಲವಾಗಿದೆ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ, ಅವರ ತೀರ್ಪಿನ ಪ್ರಕಾರ ಹೊಸ ಆಡಳಿತ ಬರಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಸರಕಾರಕ್ಕೆ ಸವಾಲೆಸೆದಿದ್ದಾರೆ.
ರವಿವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಕೋವಿಡ್-19 ರಾಜ್ಯ ಮಟ್ಟದ ಕಾಂಗ್ರೆಸ್ ಮೇಲ್ವಿಚಾರಣಾ ಸಮಿತಿ ವರದಿಯನ್ನು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, `ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸೋಣ. ಜನರ ಬಳಿ ಹೋಗೋಣ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದರ ಆಧಾರದ ಮೇಲೆ ಹೊಸ ಆಡಳಿತ ನೀಡೋಣ' ಎಂದು ಸಲಹೆ ಮಾಡಿದರು.
`ಯಡಿಯೂರಪ್ಪ ನೆರೆ ಪರಿಶೀಲನೆಗೆ ಪ್ರವಾಸ ಕೈಗೊಂಡಿದ್ದಾರೆ. ಅವರ ಸ್ಥಾನ ಏನಾಗುತ್ತದೋ ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮೂರು ವರ್ಷಗಳಿಂದ ಈ ರೀತಿ ಮಳೆ-ನೆರೆ ಬರುತ್ತಿದೆ. ನಮ್ಮ ಪಕ್ಷದಿಂದ ಆರ್.ವಿ.ದೇಶಪಾಂಡೆ ಹಾಗೂ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ತಂಡಗಳು ನೆರೆ ಪರಿಶೀಲನೆಗೆ ತೆರಳಿವೆ. ಬೆಳಗಾವಿಯಲ್ಲಿ ನಿಮ್ಮದೇ ಪಕ್ಷದ 10ಕ್ಕೂ ಹೆಚ್ಚು ಶಾಸಕರಿದ್ದಾರೆ. ಸರಕಾರವೂ ನಿಮ್ಮದೇ ಇದೆ. ಆದರೂ, ಕಳೆದ ವರ್ಷದ ನೆರೆಗೆ ಪರಿಹಾರ ನೀಡಲು ನಿಮಗೆ ಸಾಧ್ಯವಾಗಿಲ್ಲ ಏಕೆ? ಮನೆ ಕಟ್ಟಿಕೊಡಲು ಆಗಿಲ್ಲ ಏಕೆ? ಈ ವರ್ಷದ ನೆರೆ ಪಕ್ಕಕ್ಕಿಡಿ, ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ಎರಡು ವರ್ಷಗಳ ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಯಾಕೆ? ಇದನ್ನು ಕೊಡಲು ಆಗಿಲ್ಲ ಎಂದರೆ ಈ ಸರಕಾರ ಏಕಿರಬೇಕು? ಯಾವ ಕಾರಣಕ್ಕೆ ನಿಮಗೆ ಅಧಿಕಾರ ಬೇಕು?' ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
`ಈ ಹಿಂದೆ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ನೆರೆ ಬಂದಾಗ ಪ್ರಧಾನಮಂತ್ರಿ ಅಲ್ಲಿಗೆ ಭೇಟಿ ನೀಡಿದ್ದರು. ಆದರೆ ಕರ್ನಾಟಕಕ್ಕೆ ಏಕೆ ಬರಲಿಲ್ಲ? ನಮ್ಮ ರಾಜ್ಯಕ್ಕೆ ಏಕೆ ಸೂಕ್ತ ಪರಿಹಾರ ನೀಡಲಿಲ್ಲ? ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ? ಆದರೂ, ಬಿಜೆಪಿ ಸಂಸದರು ಏಕೆ ಒತ್ತಡ ತರಲಿಲ್ಲ? ಲಸಿಕೆ ವಿಚಾರದಲ್ಲಿ ಗುಜರಾತಿಗೆಷ್ಟು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆಷ್ಟು ಕೊಟ್ಟಿದ್ದಾರೆ? ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿಲ್ಲವೇ? ಇದೇನಾ ಬಿಜೆಪಿ, ಎನ್ಡಿಎ ಸಂಸ್ಕೃತಿ?
ಬಿಜೆಪಿಗೆ ಅಧಿಕಾರ ನಡೆಸಲು, ಜನರ ಸೇವೆ ಮಾಡಲು ಅರ್ಹತೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಭಿವೃದ್ಧಿ ವಿಚಾರ ಪಕ್ಕಕ್ಕಿಡಿ. ಜನ ಕಷ್ಟದಲ್ಲಿರುವಾಗ, ಆಸ್ತಿ, ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿರುವಾಗ ಈ ಸರಕಾರ ಸ್ಪಂದಿಸಲಿಲ್ಲ. ಸಂಪೂರ್ಣ ವಿಫಲವಾಗಿದೆ' ಎಂದು ಶಿವಕುಮಾರ್ ದೂರಿದರು.
`ಯಡಿಯೂರಪ್ಪ ಅವರು ಅಧಿಕಾರ ತೆಗೆದುಕೊಂಡ ದಿನದಿಂದ ರಾಜಕೀಯ ಅನಿಶ್ಚಿತತೆ ಇದೆ ಎಂದು ಅವರೇ ಹೇಳಿದ್ದಾರೆ. ಅದೇ ಅವರ ಆಡಳಿತ. ಅದೇ ಜನರಿಗೆ ಕೊಟ್ಟಿರುವ ಕೊಡುಗೆ. ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವನ್ನು ಎಲ್ಲರೂ ಗಮನಿಸಿದ್ದಾರೆ. ಕೋವಿಡ್ ಆರಂಭವಾದಾಗ ಪಕ್ಷದ ಜವಾಬ್ದಾರಿ ಹೊತ್ತೆ. ಜನರ ಸೇವೆ ಮಾಡಲು ಅವಕಾಶ ಸಿಕ್ಕಿತು. ಮೊದಲ ಅಲೆಯಲ್ಲಿ ನಾವು ಅತ್ಯುತ್ತಮ ನಿಲುವು ತೆಗೆದುಕೊಂಡೆವು. ವಲಸೆ ಕಾರ್ಮಿಕರಿಗೆ ಕೊಟ್ಟ ರಕ್ಷಣೆ, ಅವರಿಗೆ ತುಂಬಿದ ಧೈರ್ಯ, ರೈತರಿಗೆ ಬೆಂಬಲವಾಗಿ ನಿಂತದ್ದು, ಅವರ ಬೆಳೆ ಖರೀದಿ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದಾರೆ ಎಂದು ಅವರು ತಿಳಿಸಿದರು.
`ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಸರಕಾರದ ದುಡ್ಡಲ್ಲಿ ತಮ್ಮ ಫೆÇೀಟೋ ಹಾಕಿಕೊಂಡು ಆಹಾರ ಕಿಟ್ ಕೊಟ್ಟರೆ, ನಮ್ಮ ನಾಯಕರು ತಮ್ಮ ಸ್ವಂತ ದುಡ್ಡಿನಲ್ಲಿ ಆಹಾರ ಕಿಟ್, ಆಕ್ಸಿಜನ್, ದಿನಸಿ ಕಿಟ್, ಸ್ಯಾನಿಟೈಸರ್ ಕೊಟ್ಟಿದ್ದಾರೆ. ನಾವು ಸರಕಾರಕ್ಕೆ ಪರ್ಯಾಯವಾಗಿ ಜನರಿಗೆ 1,225 ಆಂಬುಲೆನ್ಸ್ ಸೇವೆ ಒದಗಿಸಿದ್ದೇವೆ. 12.53 ಲಕ್ಷ ಮೆಡಿಕಲ್ ಕಿಟ್ ಹಂಚಿದ್ದೇವೆ. 93,47,867 ಆಹಾರ ಕಿಟ್ ನೀಡಿದ್ದೇವೆ. 24,654 ಆಕ್ಸಿಜನ್ ಸಿಲಿಂಡರ್ ನೀಡಿದ್ದೇವೆ. ಇದಕ್ಕೆ ದಾಖಲೆಗಳಿವೆ' ಎಂದು ಶಿವಕುಮಾರ್ ಮಾಹಿತಿ ನೀಡಿದರು.
`ಒತ್ತಡ ಹಾಕಿ ಸರಕಾರ ಸರ್ವಪಕ್ಷ ಸಭೆ ಕರೆಯುವಂತೆ ಮಾಡಿದೆವು. ವೃತ್ತಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡಿದೆವು. ವಲಸಿಗರನೇಕರು ರಸ್ತೆಯಲ್ಲಿ ಸತ್ತರು. ವಲಸಿಗರು ತಮ್ಮ ಊರಿಗೆ ಹೋಗಲು ಸರಕಾರ ಮೂರು ಪಟ್ಟು ಪ್ರಯಾಣದರ ವಿಧಿಸಿತ್ತು. ನಾವು ಅವರ ನೆರವಿಗೆ ಧಾವಿಸಿದಾಗ ಸರಕಾರ ಒತ್ತಡಕ್ಕೆ ಮಣಿದು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿತು. ಮತಕ್ಕಾಗಿ ನಾವು ಈ ಕೆಲಸ ಮಾಡಲಿಲ್ಲ. ವಿಪಕ್ಷವಾಗಿ ಇದು ನಮ್ಮ ಜವಾಬ್ದಾರಿ. ಜನರ ಸಮಸ್ಯೆ ಮಧ್ಯೆ ಇರಬೇಕು ಎಂಬುದು ನಮ್ಮ ಬದ್ಧತೆ' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
`10 ಸಾವಿರ ಹಾಸಿಗೆ, ಕೋವಿಡ್ ಔಷಧದಲ್ಲಿ ಅವ್ಯವಹಾರ ಬಯಲಿಗೆಳೆದೆವು. ಕೋವಿಡ್ ನಿಂದ ಸತ್ತವರನ್ನು ಸರಕಾರ ಹೇಗೆ ನಡೆಸಿಕೊಂಡಿತು ಎಂಬುದನ್ನು ನಾನು ಹೇಳಬೇಕಿಲ್ಲ. ಎಲ್ಲರೂ ನೋಡಿದ್ದಾರೆ. 2ನೆ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರೂ ಸರ್ಕಾರ ಜಾಗೃತವಾಗಲಿಲ್ಲ. ಸರಕಾರ ಕೆಲಸ ಮಾಡುತ್ತದೋ, ಇಲ್ಲವೋ ಲೆಕ್ಕಿಸದೇ ನಮ್ಮ ಜವಾಬ್ದಾರಿ ನಾವು ನಿಭಾಯಿಸಿದೆವು. ಅಂದಿನಿಂದ ಇಂದಿನವರೆಗೂ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ಇಂದಿಗೂ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಅವರಿಗೆ ನೆರವು, ಸಾಂತ್ವನ ನೀಡುತ್ತಿದ್ದಾರೆ' ಎಂದು ಅವರು ವಿವರಿಸಿದರು.
`ಅಧಿಕಾರದ ಜಂಜಾಟ ನಮಗೆ ಬೇಡ. ಆಸ್ಪತ್ರೆಯ ದುಬಾರಿ ಬಿಲ್ ಕಟ್ಟಲು ಜನ ತಮ್ಮ ಆಸ್ತಿ, ಚಿನ್ನವನ್ನು ಅಡವಿಟ್ಟಿದ್ದಾರೆ, ಮಾರಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಮಧ್ಯಂತರ ವರದಿ ಬಂದಿದ್ದು, ಎಐಸಿಸಿಗೆ ಈ ವರದಿ ಕಳುಹಿಸಲಾಗುತ್ತದೆ. ಮುಂದೆ ಅಂತಿಮ ವರದಿ ಬರಲಿದೆ. ಈ ಕೆಲಸಕ್ಕಾಗಿ ನಮ್ಮ ತಂಡವನ್ನು ಅಭಿನಂದಿಸುತ್ತೇನೆ. ಪಕ್ಷದ ಶಾಸಕರು ಇಲ್ಲದ ಕಡೆಗಳಲ್ಲೂ ಸಾವಿರಾರು ಆಹಾರ ಕಿಟ್ಗಳನ್ನು ಹಂಚಲಾಗಿದೆ. ಸರಕಾರ ಮಾಡಲಾಗದ ಕೆಲಸ ನಾವು ಮಾಡಿದ್ದೇವೆ. 100 ಕೋಟಿ ರೂ.ಲಸಿಕೆ ಕಾರ್ಯಕ್ರಮ ರೂಪಿಸಿದ್ದೆವು. ಅದಕ್ಕೆ ಒಪ್ಪಿಗೆ ನೀಡಲು ಸರಕಾರಕ್ಕೆ ಮನಸ್ಸಾಗಲಿಲ್ಲ. ನಮ್ಮ ಒತ್ತಡಕ್ಕೆ ಮಣಿದು ಉಚಿತ ಲಸಿಕೆ ಎಂದು ಘೋಷಿಸಿದರು.
ನಮ್ಮ ಶಾಮನೂರು ಶಿವಶಂಕರಪ್ಪ ಅವರು 3 ಲಕ್ಷ ಜನರಿಗೆ ಉಚಿತ ಲಸಿಕೆ ನೀಡಿ ಇಡೀ ದೇಶಕ್ಕೆ ಮಾದರಿಯಾದರು. ನಮ್ಮ ಕಾರ್ಯಕರ್ತರು ಸ್ವಯಂ ಸೇವಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಉಚಿತ ಲಸಿಕೆ ನೀಡಿದರು. ಇದು ಕಾಂಗ್ರೆಸ್ ಪಕ್ಷದ ಕಾರ್ಯ. ಇಂತಹ ಒಂದು ಕೆಲಸವನ್ನು ಬೇರೆಯವರು ಮಾಡಿರುವುದನ್ನು ತೋರಿಸಿ. ಲೋಕಸಭಾ ಸದಸ್ಯರು ಹಾಸಿಗೆ ದಂಧೆ ಬಯಲಿಗೆಳೆದರು. ಆದರೆ, ಅದನ್ನು ಮಾಡಿದವರು ಯಾರು? ಅದು ಏನಾಯ್ತು? ಚಾಮರಾಜನಗರ ದುರ್ಘಟನೆ ಬಗ್ಗೆ ಜನರ ದಿಕ್ಕುತಪ್ಪಿಲು ಅವರ ಸರ್ಕಾರದ ದಂಧೆಯನ್ನೇ ಬಯಲು ಮಾಡಿದರು. ಬಹಳ ಸಂತೋಷವಾಯಿತು. ಒಂದು ಸಮಾಜದ ಮೇಲೆ ದ್ವೇಷ ಕಾರಿದರು. ಇತಿಹಾಸ ಮುಚ್ಚಿಹಾಕಲು ಸಾಧ್ಯವಿಲ್ಲ' ಎಂದು ಅವರು ಎಚ್ಚರಿಕೆ ನೀಡಿದರು.
`ಡೆತ್ ಆಡಿಟ್ ಮಾಡಲು ನಮ್ಮ ತಂಡಕ್ಕೆ ಸೂಚನೆ ನೀಡಿದ್ದು, ಪ್ರತಿ ಬ್ಲಾಕ್ ಮಟ್ಟದಲ್ಲೂ ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಮಯದಲ್ಲಿ ಆಡಳಿತ ಪಕ್ಷದ ಒಬ್ಬ ಮಂತ್ರಿ, ಶಾಸಕ, ಕಾರ್ಯಕರ್ತರು ಯಾರಾದರೂ ಒಬ್ಬರು ಇಂತಹ ಕೆಲಸ ಮಾಡಿದ್ದರೆ ಹೇಳಿ. ನಾವು ಭೇಟಿ ಕೊಟ್ಟ 20 ದಿನಗಳ ನಂತರ ಸರಕಾರದ ದುಡ್ಡಲ್ಲಿ ಸಂತ್ರಸ್ತರ ಮನೆಗೆ ಹೊರಟಿದ್ದಾರೆ. ಸರಕಾರ ಈ ವಿಚಾರದಲ್ಲಿ ವಿಫಲವಾಗಿದ್ದು, ನಮ್ಮ ಸೇವೆಗೆ ಒಂದು ಲೆಕ್ಕ ಇರಲಿ ಎಂದು ಈ ಸಮಿತಿ ರಚಿಸಿ ವರದಿ ಸಿದ್ಧಪಡಿಸಿದ್ದೇವೆ.
ಮುಖ್ಯಮಂತ್ರಿಗಳೇ ಆಕ್ಸಿಜನ್ ಇಲ್ಲದೆ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರಕಾರದ ಸಚಿವಾಲಯಕ್ಕೆ ಮಾಹಿತಿ ನೀಡಿದ ಮೇಲೆ ಚಾಮರಾಜನಗರದಲ್ಲಿ ಸತ್ತ 24 ಜನರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಿರುವುದೇಕೇ? 36 ಜನ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆಂದು ಹೈಕೋರ್ಟ್ ನೇಮಕ ಮಾಡಿದ ಸಮಿತಿ ವರದಿ ತಿಳಿಸಿದೆ. ಅವರಿಗೆ ಕೋವಿಡ್ ನಿಂದ ಸತ್ತಿದ್ದಾರೆಂಬ ಪ್ರಮಾಣ ಪತ್ರವನ್ನೂ ನೀಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮನೆ-ಮನೆಗೂ ತೆರಳಿ ಅವರ ಕುಟುಂಬದವರ ರಕ್ಷಣೆಗೆ ನಿಲ್ಲಲಿದೆ' ಎಂದು ಅವರು ಟೀಕಿಸಿದರು.







