ಉಡುಪಿ: 12 ವರ್ಷಗಳ ಬಳಿಕ ಹೆತ್ತಬ್ಬೆಯ ಮಡಿಲು ಸೇರಿದ ಮಗ !

ಉಡುಪಿ, ಜು.28: ಕಳೆದ 12 ವರ್ಷಗಳಿಂದ ನಾಪತ್ತೆಯಾಗಿದ್ದ ಮಗ ಇದೀಗ ತನ್ನ ಹೆತ್ತಬ್ಬೆಯ ಮಡಿಲು ಸೇರಿದ್ದಾನೆ. ಉಡುಪಿಯಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಕುಂದಾಪುರ ತಾಲೂಕಿನ ವಕ್ವಾಡಿ ತೆಂಕಬೆಟ್ಟುವಿನ ಪ್ರಶಾಂತ್ ಶೆಟ್ಟಿ (37) ಎಂಬವರನ್ನು ಮನವೊಲಿಸಿದ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯ ಕರ್ತರು, ಆತನನ್ನು ಮಂಗಳವಾರ ಆತನ ಮನೆಗೆ ತಲುಪಿಸಿದ್ದಾರೆ.
ಉಡುಪಿ ನಗರ ಪರಿಸರದಲ್ಲಿ ಕೆಲವು ವರ್ಷಗಳಿಂದ ಈತ ನೆಲೆಕಂಡಿದ್ದು, ಶ್ರೀಕೃಷ್ಣ ಮಠ ಸೇರಿದಂತೆ ನಗರದ ವಿವಿಧೆಡೆ ಭಿಕ್ಷೆಯನ್ನು ಯಾಚಿಸುತ್ತಿ ದ್ದನು. ರಾತ್ರಿಯ ಸಮಯವನ್ನು ಬಸ್ ನಿಲ್ದಾಣ, ಅಂಗಡಿ ಜಗುಲಿಯಲ್ಲಿ ಮಲಗಿ ದಿನ ಕಳೆಯುತ್ತಿದ್ದನು. ಸದೃಢ ಯುವಕನ ಭಿಕ್ಷಾಟನೆ ಕಂಡು ನಾಗರಿಕ ಸಮಿತಿಯ ಕಾರ್ಯಕರ್ತರು, ಆತನಿಗೆ ಬುದ್ಧಿ ಹೇಳಿ ಮನೆಗೆ ಹೋಗುವಂತೆ ತಿಳಿಸಿದ್ದರು.
ಕೊನೆಗೆ ಮನ ಪರಿವರ್ತನೆಗೊಂಡ ಯುವಕ ತನ್ನನ್ನು ಮನೆಗೆ ಸೇರಿಸುವಂತೆ ವಿನಂತಿಸಿಕೊಂಡಿದ್ದಾನೆ. ಅದರಂತೆ ಸಮಿತಿಯ ಕಾರ್ಯ ಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಕ್ವಾಡಿಯ ಸಾಮಾಜಿಕ ಕಾರ್ಯ ಕರ್ತೆ ಅಂಬಿಕಾ ಅವರ ಸಹಕಾರದಿಂದ ಯುವಕನನ್ನು ವಾಹನದಲ್ಲಿ ಕರೆದೊಯ್ದು ಹೆತ್ತಬ್ಬೆಯ ಮಡಿಲಿಗೆ ಒಪ್ಪಿಸಿದರು.





