ಮರವೂರು ಸೇತುವೆ ದುರಸ್ತಿ ಪೂರ್ಣ; ಜು.30ಕ್ಕೆ ವಾಹನ ಸಂಚಾರಕ್ಕೆ ಮುಕ್ತ: ದ.ಕ. ಜಿಲ್ಲಾಧಿಕಾರಿ
![ಮರವೂರು ಸೇತುವೆ ದುರಸ್ತಿ ಪೂರ್ಣ; ಜು.30ಕ್ಕೆ ವಾಹನ ಸಂಚಾರಕ್ಕೆ ಮುಕ್ತ: ದ.ಕ. ಜಿಲ್ಲಾಧಿಕಾರಿ ಮರವೂರು ಸೇತುವೆ ದುರಸ್ತಿ ಪೂರ್ಣ; ಜು.30ಕ್ಕೆ ವಾಹನ ಸಂಚಾರಕ್ಕೆ ಮುಕ್ತ: ದ.ಕ. ಜಿಲ್ಲಾಧಿಕಾರಿ](https://www.varthabharati.in/sites/default/files/images/articles/2021/07/29/300657-1627571188.jpg)
ಮಂಗಳೂರು, ಜು.29: ಮಂಗಳೂರು- ಅತ್ರಾಡಿ ರಾಜ್ಯ ಹೆದ್ದಾರಿಯ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ಮರವೂರು ಸೇತುವೆ ಇತ್ತೀಚೆಗೆ ಕುಸಿದಿತ್ತು. ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಜು.30ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ತಜ್ಞರ ಉಪಸ್ಥಿತಿಯಲ್ಲಿ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎನ್ನುವುದನ್ನು ಗುರುವಾರ ಪರೀಕ್ಷಿಸಿದರು. ಪರೀಕ್ಷೆ ಯಶಸ್ವಿಯಾಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ತಜ್ಞ ಇಂಜಿನಿಯರ್ಗಳ ಸಲಹೆಯಂತೆ ಕೆಲ ದಿನಗಳ ಹಿಂದೆಯೇ ಸೇತುವೆಯ ಪಿಲ್ಲರ್ನ್ನು ಮೇಲಕ್ಕೆ ಎತ್ತಿ ಯಥಾಸ್ಥಿತಿಗೆ ತರಲಾಗಿತ್ತು. ನಂತರ ವಾಹನ ಸಂಚಾರ ಸುಲಭವಾಗಲೆಂದು ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಇದೀಗ ಕಾಮಗಾರಿ ಪೂರ್ಣಗೊಂಡಿದೆ.
ಮರವೂರು ಸೇತುವೆಯಲ್ಲಿ ಇತ್ತೀಚೆಗೆ ಭಾರೀ ಬಿರುಕು ಮೂಡಿರುವುದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಹಿತಿ ರವಾನಿಸಿದ್ದರು. ಕೂಡಲೇ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವರು ಸುತ್ತುಬಳಸಿ ಹೋಗುವಂತಾಗಿತ್ತು. ಇದೀಗ ಸುಮಾರು ಒಂದೂವರೆ ತಿಂಗಳ ಬಳಿಕ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗಲಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.