ಅಂತರ್-ಧರ್ಮೀಯ ವಿವಾಹವನ್ನು ಬಲವಂತವಾಗಿ ನಿಲ್ಲಿಸಿದ ಕರ್ಣಿಸೇನಾ ಕಾರ್ಯಕರ್ತರು
ಸಾಂದರ್ಭಿಕ ಚಿತ್ರ, photo: The new Indian express
ಲಕ್ನೊ: ಕರ್ಣಿಸೇನಾ ಕಾರ್ಯಕರ್ತರು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಅಂತರ್ ಧರ್ಮೀಯ ವಿವಾಹವನ್ನು ಬಲವಂತವಾಗಿ ನಿಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು Indian Express ವರದಿ ಮಾಡಿದೆ.
ಬುಧವಾರ ಕರ್ಣಿ ಸೇನಾ ಸದಸ್ಯರು, ಮದುವೆಯನ್ನು ನಿಲ್ಲಿಸಿದ ನಂತರ, ಯುವತಿಯನ್ನು ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗುವಂತೆ ಒತ್ತಾಯಿಸಿದ್ದರು. ನ್ಯಾಯಾಲಯದಲ್ಲಿ ಹೇಳಿಕೆ ನೀಡುವವರೆಗೂ 18 ವರ್ಷದ ಯುವತಿಯನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು ಎಂದು Indian Express ವರದಿ ಮಾಡಿದೆ.
"ಯುವತಿಯ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನು ಅಪಹರಿಸಲಾಗಿದೆ ಎಂದು ಅವರು ದೂರಿದ್ದಾರೆ. ನಾವು ಯುವತಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಅಲ್ಲಿ ಆಕೆ ತನ್ನ ಹೇಳಿಕೆಯನ್ನು ದಾಖಲಿಸಲಿದ್ದಾಳೆ. ಯುವತಿ ವಯಸ್ಕಳಾಗಿರುವುದರಿಂದ ಆಕೆಯ ಹೇಳಿಕೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ”ಎಂದು ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಡಾ ಅವರು Indian Express ಗೆ ತಿಳಿಸಿದರು.
ಆದಾಗ್ಯೂ, ಎಸ್ಪಿ, ಅಕ್ರಮ ಮತಾಂತರದ ಆರೋಪವನ್ನು ನಿರಾಕರಿಸಿದರು.
Indian Express ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ ಯುವತಿ ಕರ್ಣಿಸೇನೆಯ ಸದಸ್ಯರಿಂದ ಕಿರುಕುಳಕ್ಕೊಳಗಾಗಿದ್ದರೂ, ತಾನು ಸ್ವಇಚ್ಛೆಯಿಂದ ಮದುವೆಯಾಗುತ್ತಿದ್ದೇನೆ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.