ಗುಲ್ಬರ್ಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ:ಹೋರಾಟಗಾರರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಕಲಬುರಗಿ, ಜು.30: ಗುಲ್ಬರ್ಗಾ ನಗರವನ್ನು ಕಲಬುರಗಿ ಎಂದು ಹೆಸರು ಬದಲಾವಣೆ ಮಾಡಿದ ರಾಜ್ಯ ಸರಕಾರದ ನಡೆಯನ್ನು ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ 7 ಜನ ಹೋರಾಟಗಾರರನ್ನು ಜಿಲ್ಲಾ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
2014ರ ನವೆಂಬರ್ 11ರಂದು ನಗರದ ಮುಸ್ಲಿಂ ಚೌಕ್ ಪ್ರದೇಶದಲ್ಲಿ ಗುಲ್ಬರ್ಗಾ ನಗರದ ಹೆಸರನ್ನು ಕಲಬುರಗಿ ಎಂದು ಬದಲಿಸಿದ ಸರಕಾರದ ನಡೆಯನ್ನು ವಿರೋಧಿಸಿ ಹೋರಾಟಗಾರರಾದ ನ್ಯಾಯವಾದಿ ಕಲೀಮ್, ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹ್ಮದ್, ನ್ಯಾಯವಾದಿ ಸೈಯದ್ ಮಝರ್ ಹುಸೇನಿ, ನ್ಯಾಯವಾದಿ ವಹಾಬ್ ಬಾಬಾ, ಸೈಯದ್ ಮುಹಮ್ಮದ್ ಹಬೀಬುದ್ದೀನ್, ಮುಹಮ್ಮದ್ ಮೊಹ್ಸಿನ್ ಹಾಗೂ ಶಿವರಾಜ್ ಅವರ ವಿರುದ್ಧ ಚೌಕ್ ಠಾಣೆಯ ಫೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
3 ಎಡಿಡಿಎಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಧೀಶ ಬಸವರಾಜ್ ನೇಸರಗಿ ಪ್ರಕರಣ ಕುರಿತು ವಿಚಾರಣೆ ನಡೆಸಿ ಬುಧವಾರ ಎಲ್ಲ ಹೋರಾಟಗಾರರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದರು.
ನಿರಂತರ 7 ವರ್ಷಗಳ ಹೋರಾಟದ ಬಳಿಕ ನಮಗೆ ನ್ಯಾಯ ಸಿಕ್ಕಿದೆ. ಇದು ಸಂವಿಧಾನದ ಗೆಲುವು ಎಂದು ಎಸ್.ಡಿ.ಪಿ.ಐ ಮುಖಂಡ ಮುಹಮ್ಮದ್ ಮೊಹ್ಸಿನ್ ಹರ್ಷ ವ್ಯಕ್ತಪಡಿಸಿದ್ದಾರೆ.





