ಮಂಗಳೂರು: ಗೇರುಬೀಜ ಕಾರ್ಖಾನೆಯ ಮಾಲಕ ನಾಪತ್ತೆ
![ಮಂಗಳೂರು: ಗೇರುಬೀಜ ಕಾರ್ಖಾನೆಯ ಮಾಲಕ ನಾಪತ್ತೆ ಮಂಗಳೂರು: ಗೇರುಬೀಜ ಕಾರ್ಖಾನೆಯ ಮಾಲಕ ನಾಪತ್ತೆ](https://www.varthabharati.in/sites/default/files/images/articles/2021/07/31/300928-1627747928.jpg)
ಮಂಗಳೂರು, ಜು.31: ಬೈಕಂಪಾಡಿಯಲ್ಲಿ ಗೇರುಬೀಜ ಕಾರ್ಖಾನೆಯೊಂದರ ಮಾಲಕ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕಂಪಾಡಿಯ ಜೈ ಶ್ರೀ ರಾಮ ಲಕ್ಷ್ಮೀ ಕ್ಯಾಶುಸ್’ ಹೆಸರಿನ ಗೇರುಬೀಜ ಕಾರ್ಖಾನೆಯ ಮಾಲಕ ರಾಮಾಂಜನೇಯ ಡಿ. (41) ನಾಪತ್ತೆಯಾದವರು.
ಕಾರ್ಖಾನೆಯಲ್ಲಿ 30 ಮಂದಿ ಕೆಲಸಕ್ಕಿದ್ದರು. ಇತ್ತೀಚೆಗೆ ಕಾರ್ಖಾನೆಯು ಸುಮಾರು ಒಂದು ಕೋಟಿ ರೂ.ಗಳಷ್ಟು ನಷ್ಟ ಹೊಂದಿದ್ದರಿಂದ ಬೇಸರ ಗೊಂಡಿದ್ದರು ಎನ್ನಲಾಗಿದೆ. ಜು.29ರಂದು ಅಪರಾಹ್ನ ಬೇರೊಂದು ಮನೆ ನೋಡಿಕೊಂಡು ಬರುವುದಾಗಿ ಹೇಳಿ ಬೈಕ್ನಲ್ಲಿ ಹೋದವರು ನಾಪತ್ತೆ ಯಾಗಿದ್ದಾರೆ ಎಂದು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ರಾಮಾಂಜನೇಯ 5.6 ಅಡಿ ಎತ್ತರವಿದ್ದು, ಕಿತ್ತಳೆ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕನ್ನಡ, ತೆಲುಗು, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಬರ್ಕೆ ಪೊಲೀಸ್ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.