ಅತ್ಯಾಚಾರ ಎಸಗಿದವನನ್ನೇ ವಿವಾಹವಾಗಲು ಅನುಮತಿ ನೀಡುವಂತೆ ಕೋರಿ ಯುವತಿ ಸುಪ್ರೀಂ ಕೋರ್ಟ್ ಗೆ ಮನವಿ
ತಿರುವನಂತಪುರ, ಜು. 30: ತನ್ನ ಮೇಲೆ ಅತ್ಯಾಚಾರ ಎಸಗಿ 20 ವರ್ಷ ಜೈಲು ಶಿಕ್ಷೆಗೆ ಒಳಗಾದ ಹಾಗೂ ವ್ಯಾಟಿಕನ್ನಿಂದ ಪಾದ್ರಿ ಸ್ಥಾನದಿಂದ ವಜಾಗೊಂಡಿದ್ದ 53 ವರ್ಷದ ಕೇರಳದ ಕೆಥೋಲಿಕ್ ಪಾದ್ರಿ ರೋಬಿನ್ ವಡಕ್ಕುಂಚೇರಿಯನ್ನು ವಿವಾಹವಾಗಲು ಅನುಮತಿ ನೀಡುವಂತೆ ಕೋರಿ ಅತ್ಯಾಚಾರ ಸಂತ್ರಸ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಸಂತ್ರಸ್ತೆ ಸಲ್ಲಿಸಿದ ಮನವಿ ಸೋಮವಾರ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಂದಿತು. ವಡಕ್ಕುಮ್ಚೇರಿಗೆ ಜಾಮೀನು ನೀಡುವಂತೆ ಸಂತ್ರಸ್ತೆ ಕೋರಿದ್ದಾರೆ. ತನ್ನ ಸ್ವಂತ ಅಭಿಪ್ರಾಯದಿಂದ ಈ ಮನವಿ ಸಲ್ಲಿಸಿದ್ದೇನೆ ಎಂದು ಕೂಡ ಸಂತ್ರಸ್ತೆ ಹೇಳಿದ್ದಾರೆ.
ಈ ಹಿಂದೆ ವಡಕುಂಚೇರಿ ಸಂತ್ರಸ್ತೆಯನ್ನು ವಿವಾಹವಾಗಲು ಅನುಮತಿ ನೀಡುವಂತೆ ಕೋರಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಕಣ್ಣೂರ್ ಸಮೀಪದ ಚರ್ಚ್ನಲ್ಲಿ ವಡಕ್ಕುಂಚೇರಿ ಪ್ಯಾರಿಶ್ ವಿಕಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಚರ್ಚ್ನ ಶಾಲೆಯಲ್ಲಿ ಮ್ಯಾನೇಜರ್ ಕೂಡ ಆಗಿದ್ದರು. ಈ ಸಂದರ್ಭ ಅವರು 11ನೇ ತರಗತಿ ಕಲಿಯುತ್ತಿದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದರು. 2007 ಫೆಬ್ರವರಿ 7ರಂದು ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಡಕ್ಕುಂಚೇರಿ ವಿದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ಸಂದರ್ಭ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2017 ಫೆಬ್ರವರಿ 27ರಂದು ಅವರನ್ನು ಪೊಲೀಸರು ಬಂಧಿಸಿದ್ದರು.