ಬುಧವಾರ ನೂತನ ಸಚಿವರ ಪ್ರಮಾಣ ವಚನ ಸಾಧ್ಯತೆ: ದಿಲ್ಲಿಗೆ ಸಿಎಂ ಬೊಮ್ಮಾಯಿ ಪ್ರಯಾಣ
ಬೆಂಗಳೂರು, ಆ. 1: ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ಸಂಪುಟ ರಚನೆ ಸಂಬಂಧ ವರಿಷ್ಟರೊಂದಿಗೆ ಸಮಾಲೋಚನೆ ನಡೆಸಿದ್ದು, ನಾಲ್ಕು ಮಂದಿ ಉಪಮುಖ್ಯಮಂತ್ರಿಗಳೊಂದಿಗೆ 15 ಮಂದಿ ಸಚಿವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ರವಿವಾರ ಸಂಜೆ ದಿಲ್ಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿ ಅವರು, 21 ಮಂದಿ ಸಚಿವರ ಪಟ್ಟಿಯನ್ನು ವರಿಷ್ಠರ ಮುಂದಿಟ್ಟಿದ್ದರು. ಆ ಪೈಕಿ ನಾಲ್ವರು ಉಪಮುಖ್ಯಮಂತ್ರಿಗಳು ಸೇರಿದಂತೆ 15 ಮಂದಿ ಸಚಿವರ ಮೊದಲ ಪಟ್ಟಿಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎಂದು ಹೇಳಲಾಗುತ್ತಿದೆ.
ಬುಧವಾರದ ವೇಳೆಗೆ ನೂತನ ಸಚಿವ ಸಂಪುಟ ರಚನೆ ಮಾಡುವ ಇರಾಧೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಭವನೀಯ ಸಚಿವರ ಪಟ್ಟಿಯೊಂದಿಗೆ ದಿಲ್ಲಿಗೆ ತೆರಳಿದ್ದು, ಆ.2ರ ಸೋಮವಾರ ಬೆಂಗಳೂರಿಗೆ ಹಿಂದಿರುಗಲಿದ್ದಾರೆಂದು ಗೊತ್ತಾಗಿದೆ.
ರವಿವಾರ ರಾತ್ರಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಲಿದ್ದು, ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವವರ ಪಟ್ಟಿಯನ್ನು ಅಖೈರುಗೊಳಿಸಿಕೊಂಡು ರಾಜ್ಯಕ್ಕೆ ಮರಳಲಿದ್ದಾರೆಂದು ಮೂಲಗಳು ತಿಳಿಸಿವೆ.
`ಟೋಕ್ಯೊ ಒಲಿಂಪಿಕ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾ ಆಟಗಾರ್ತಿಯನ್ನು ಮಣಿಸಿದ ಪಿ.ವಿ.ಸಿಂಧು ಅವರಿಗೆ ಅಭಿನಂದನೆಗಳು. ಒಲಿಂಪಿಕ್ನಲ್ಲಿ ಭಾರತಕ್ಕೆ ವೈಯಕ್ತಿಕವಾಗಿ ಎರಡು ಪದಕ ಗಳಿಸಿದ ಮೊದಲ ಆಟಗಾರ್ತಿಯಾದ ಪಿ.ವಿ.ಸಿಂಧೂ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ