ಬೆಂಗಳೂರು: ರೌಡಿ ಕೊಲೆ ಪ್ರಕರಣ; ಕರ್ತವ್ಯಲೋಪ ಆರೋಪ ಬೆನ್ನಲ್ಲೇ ಇನ್ಸ್ಪೆಕ್ಟರ್ ವರ್ಗಾವಣೆ
ಬೆಂಗಳೂರು, ಆ.1: ಕೋರಮಂಗಲದ ಬ್ಯಾಂಕ್ವೊಂದರಲ್ಲಿ ರೌಡಿ ಬಬ್ಲಿ ಯಾನೆ ಜೋಸೆಫ್ ಕೊಲೆ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಅಶೋಕನಗರ ಇನ್ಸ್ಪೆಕ್ಟರ್ ಭರತ್ರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ವರ್ಗಾವಣೆ ಮಾಡಿದ್ದಾರೆ.
ಇನ್ಸ್ಪೆಕ್ಟರ್ ಭರತ್ ಅನ್ನು ಅಶೋಕನಗರ ಠಾಣೆಯಿಂದ ಕಂಟ್ರೋಲ್ ರೂಂಗೆ ವರದಿ ಮಾಡಿಕೊಳ್ಳುವಂತೆ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ.
ಇತ್ತೀಚಿಗೆ ಶಾಂತಿನಗರದ ರುದ್ರಭೂಮಿಯ ಬಳಿ ಅರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗ ಕೊಲೆಯಾಗಿರುವ ರೌಡಿ ಬಬ್ಲಿ ಎರಡನೇ ಆರೋಪಿಯಾಗಿದ್ದ. ಆದರೆ, ಕೊಲೆಯತ್ನ ಪ್ರಕರಣದಲ್ಲಿ ಬಬ್ಲಿಯನ್ನು ಇನ್ಸ್ಪೆಕ್ಟರ್ ಭರತ್ ಬಂಧಿಸದೇ ಬಿಟ್ಟು ಕಳುಹಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಇದಾದ ಕೇವಲ ಮೂರು ತಿಂಗಳ ಅಂತರದಲ್ಲಿ ರೌಡಿ ಬಬ್ಲಿಯನ್ನು ಆರೋಪಿಗಳು ಕೋರಮಂಗಲದ ಬ್ಯಾಂಕ್ ಒಳಗಡೆ ನುಗ್ಗಿ ಕೊಲೆ ಮಾಡಿದ್ದರು. ಒಂದು ವೇಳೆ ಇನ್ಸ್ಪೆಕ್ಟರ್ ಮೂರು ತಿಂಗಳ ಹಿಂದೆ ಬಬ್ಲಿಯನ್ನು ಬಂಧಿಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಕೋರಮಂಗಲ ಪೊಲೀಸರಿಂದ ಆಯುಕ್ತರಿಗೆ ವರದಿ ನೀಡಲಾಗಿತ್ತು.
ಈ ವರದಿಯನ್ನ ಆಧರಿಸಿ ಆಯುಕ್ತರು ಸಿಬಿಗೆ ತನಿಖೆ ಮಾಡುವಂತೆ ಆದೇಶ ನೀಡಿದ್ದರು. ಸಿಸಿಬಿ ತನಿಖೆ ವೇಳೆ ಇನ್ಸ್ಪೆಕ್ಟರ್ ಭರತ್ ಕರ್ತವ್ಯಲೋಪ ಎಸಗಿರುವುದು ಖಚಿತವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರ ತನಿಖಾ ವರದಿ ಆಧರಿಸಿ ಆಯುಕ್ತರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.







