ಸಕಾಲ ಸೇವೆಗಳಡಿ ಅರ್ಜಿ ವಿಲೇವಾರಿಯಲ್ಲಿ ಉಡುಪಿಗೆ ಪ್ರಥಮ ಸ್ಥಾನ : ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

ಉಡುಪಿ, ಆ.2: ಸಕಾಲ ಯೋಜನೆಯಡಿ ‘ವಿಳಂಬರಹಿತ ಅರ್ಜಿ ವಿಲೇವಾರಿ’ ಯಲ್ಲಿ ಉಡುಪಿ ಜಿಲ್ಲೆಯು ಜುಲೈ ತಿಂಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಉತ್ತಮವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಪ್ರಥಮ ಸ್ಥಾನ ಉಳಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಕಾಲ ಯೋಜನೆಯ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಕಾಲ ಯೋಜನೆಯು ನಾಗರಿಕರಿಗೆ ಸರಕಾರದ ಸೇವೆಯನ್ನು ನಿಗದಿತ ಕಾಲಾವಧಿಯಲ್ಲಿ ಒದಗಿಸುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು, ಸಾರ್ವಜನಿಕರು ಸರಕಾರದ 101 ವಿವಿಧ ಇಲಾಖೆಗಳಲ್ಲಿ 1,112 ಸೇವೆಗಳಿಗೆ ನಿಗದಿತ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿ, ಸೇವೆಯ ಪ್ರಯೋಜನ ವನ್ನು ಪಡೆದುಕೊಳ್ಳಬಹುದಾಗಿದೆ ಎಂದವರು ತಿಳಿಸಿದರು.
ಸಾರ್ವಜನಿಕರು ಸಕಾಲದಡಿಯಲ್ಲಿ ನಿಗದಿತ ಅರ್ಜಿಯನ್ನು ಸಲ್ಲಿಸುವಾಗ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೆ ಶೀಘ್ರದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಅವುಗಳನ್ನು ತಡವಿಲ್ಲೇ ವಿಲೇವಾರಿ ಮಾಡಬೇಕು ಎಂದರು.
ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರು ಸಲ್ಲಿಸುವ ಅರ್ಜಿಗಳ ತಿರಸ್ಕಾರದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕು. ಸಕಾರಣವಿಲ್ಲದೆ ಯಾವುದೇ ಅರ್ಜಿಯನ್ನು ತಿರಸ್ಕಾರ ಮಾಡಬಾರದು. ಒಂದೊಮ್ಮೆ ತಿರಸ್ಕಾರ ಮಾಡುವಾಗ ಸರಿಯಾದ ಕಾರಣವನ್ನು ನೀಡಬೇಕು ಎಂದರು.
ಪ್ರಸ್ತುತ ತಿಂಗಳಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ 59,237 ಅರ್ಜಿಗಳು ಬಂದಿದ್ದು ಅವುಗಳಲ್ಲಿ 52,511 ಅರ್ಜಿಗಳು ಪುರಸ್ಕೃತಗೊಂಡಿದ್ದು, 1,094 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.
ಸಕಾಲ ಯೋಜನೆಯು 2011ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು, ಈವರೆಗೆ 6.53 ಕೋಟಿ ಅರ್ಜಿಗಳು ಬಂದಿವೆ. ಅವುಗಳಲ್ಲಿ 5.98 ಕೋಟಿಯಷ್ಟು ಅರ್ಜಿಗಳು ಪುರಸ್ಕೃತಗೊಂಡಿದ್ದು, 45.02 ಲಕ್ಷ ತಿರಸ್ಕೃತಗೊಂಡು 6.43 ಕೋಟಿ ವಿಲೇವಾರಿಯಾಗಿದೆ ಎಂದರು. ಜಿಲ್ಲೆಯಲ್ಲಿ ಈವರೆಗೆ 14.15 ಲಕ್ಷ ಅರ್ಜಿಗಳು ಬಂದಿದ್ದು, ಅವುಗಳಲ್ಲಿ 13.58ರಷ್ಟು ಅರ್ಜಿಗಳು ಪುರಸ್ಕೃತಗೊಂಡು 42,194 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.
ಅಧಿಕಾರಿಗಳು ಮುತುವರ್ಜಿ ವಹಿಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ವಿಲೇವಾರಿ ವಿಳಂಬ ಮಾಡಿದವರಿಗೆ ದಂಡ ವಿಧಿಸುವ ಅವಕಾಶವಿದೆ. ಅಲ್ಲದೇ ವಿಳಂಬವಾದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ ಎಂದು ಸದಾಶಿವ ಪ್ರಭು ವಿವರಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಕಾಲ ಯೋಜನೆಯ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.







