ಫೈನಾನ್ಸಿಯರ್ ಹತ್ಯೆ ಪ್ರಕರಣ: ಆರೋಪಿ ಅನೂಪ್ ಶೆಟ್ಟಿ 7 ದಿನ ಪೊಲೀಸ್ ಕಸ್ಟಡಿಗೆ
![ಫೈನಾನ್ಸಿಯರ್ ಹತ್ಯೆ ಪ್ರಕರಣ: ಆರೋಪಿ ಅನೂಪ್ ಶೆಟ್ಟಿ 7 ದಿನ ಪೊಲೀಸ್ ಕಸ್ಟಡಿಗೆ ಫೈನಾನ್ಸಿಯರ್ ಹತ್ಯೆ ಪ್ರಕರಣ: ಆರೋಪಿ ಅನೂಪ್ ಶೆಟ್ಟಿ 7 ದಿನ ಪೊಲೀಸ್ ಕಸ್ಟಡಿಗೆ](https://www.varthabharati.in/sites/default/files/images/articles/2021/08/2/301133-1627916690.jpg)
ಉಡುಪಿ, ಆ.2: ಕೋಟೇಶ್ವರ ಸಮೀಪದ ಕಾಳಾವರ-ಅಸೋಡು ಎಂಬಲ್ಲಿನ ಡ್ರೀಮ್ ಫೈನಾನ್ಸ್ ಸಂಸ್ಥೆಯ ಪಾಲುದಾರ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಅನೂಪ್ ಕುಮಾರ್ ಶೆಟ್ಟಿ (33)ಯನ್ನು ಪೊಲೀಸರು ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಜು.30ರಂದು ರಾತ್ರಿ ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಪೊಲೀಸರು ಗೋವಾದ ರಾಜ್ಯದ ಕೊಲ್ವಾ ಬೀಚ್ ಬಳಿ ರೆಸಾರ್ಟ್ನಲ್ಲಿ ಜು.31ರಂದು ಬಂಧಿಸಿದ್ದರು. ಆ.1ರಂದು ಮಧ್ಯಾಹ್ನ ಆರೋಪಿಯನ್ನು ಕುಂದಾಪುರಕ್ಕೆ ಕರೆದುಕೊಂಡು ಬಂದು, ಆ.2ರಂದು ಮಧ್ಯಾಹ್ನ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂಬ ಅಭಿಯೋಜನೆ ಪರ ವಾದ ಆಲಿಸಿದ ಕುಂದಾಪುರ ಒಂದನೇ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ನಾಗರತ್ನಮ್ಮ, ಆರೋಪಿಯನ್ನು ಆ.9ತನಕ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಗೆ ಇಂದೇ ಗೋವಾಕ್ಕೆ ಕರೆದುಕೊಂಡು ಹೋಗಲಿ ದ್ದಾರೆ ಎಂದು ಮೂಲಗಳು ತಿಳಿಸಿವೆ.
ವ್ಯವಹಾರ ಧ್ವೇಷ ಕೊಲೆಗೆ ಕಾರಣ
ಫೈನಾನ್ಸ್ ಪಾಲುದಾರರಾಗಿದ್ದ ಅಜೇಂದ್ರ ಶೆಟ್ಟಿ ಹಾಗೂ ಅನೂಪ್ ಶೆಟ್ಟಿ ನಡುವಿನ ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯಿಂದ ಸ್ಪಷ್ಟ ಮಾಹಿತಿ ಬಹಿರಂಗವಾಗಬೇಕಾಗಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಕೊಲೆ ನಡೆಸಿದ ಬಳಿಕ ಅಜೇಂದ್ರ ಶೆಟ್ಟಿಯ ಹೊಸ ಕಾರಿನಲ್ಲಿ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಟೋಲ್ಗೇಟ್ ಮೂಲಕ ಹಾಗೂ ಖಚಿತ ಮಾಹಿತಿ ಪಡೆದು ಆರೋಪಿಯನ್ನು 24ಗಂಟೆಯೊಳಗೆ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಆರೋಪಿಯಿಂದ ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಡ್ರಗ್ಸ್ ಸೇವನೆ ಬಗ್ಗೆ ಪರೀಕ್ಷೆ
ಆರೋಪಿ ಕೃತ್ಯ ಎಸಗುವ ವೇಳೆ ಮಾದಕ ದ್ರವ್ಯ ಸೇವಿಸಿದ್ದಾನೆಯೇ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತ ಪಡೆಸಿಕೊಳ್ಳಲಾಗುವುದು. ಕೊಲೆ ನಡೆಸಿದ ಬಳಿಕ ಅಜೇಂದ್ರ ಶೆಟ್ಟಿ ಕತ್ತಿನಲ್ಲಿದ್ದ ಸರವನ್ನು ಆರೋಪಿ ದೋಚಿಕೊಂಡು ಹೋಗಿದ್ದು, ಅದನ್ನು ಇನ್ನು ವಶಪಡಿಸಿಕೊಂಡಿಲ್ಲ. ಅದನ್ನು ಆತ ಮಾರಾಟ ಮಾಡಿದ್ದಾನೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ಎಸ್ಪಿ ತಿಳಿಸಿದರು.
ಕೊಲೆಗೆ ಬಳಸಿದ ಆಯುಧವನ್ನು ಇನ್ನಷ್ಟೆ ವಶಪಡಿಸಿಕೊಳ್ಳಬೇಕಾಗಿದೆ. ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವುದರಿಂದ ಇದರಲ್ಲಿ ಬೇರೆ ಯಾರು ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೂ ಪ್ರತಿ ಯೊಂದನ್ನು ಸೂಕ್ಷ್ಮವಾಗಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಶ್ರೀಕಾಂತ್, ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಶಂಕರನಾರಾಯಣ ಎಸ್ಸೈ ಶ್ರೀಧರ್ ನಾಯ್ಕ, ಗಂಗೊಳ್ಳಿ ಎಸ್ಸೈ ನಂಜ ನಾಯ್ಕ, ಕುಂದಾಪುರ ಗ್ರಾಮಾಂತರ ಠಾಣಾ ಎಸ್ಸೈ ನಿರಂಜನ ಗೌಡ, ಸಿಬ್ಬಂದಿ ಗಳಾದ ಮೋಹನ, ಚಂದ್ರಶೇಖರ, ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.