ಕೋವಿಡ್ ಸೋಂಕಿತರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ : ಉಡುಪಿ ಜಿಲ್ಲಾಧಿಕಾರಿ ಆದೇಶ
ಉಡುಪಿ, ಆ.4: ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸರಪಳಿಯನ್ನು ತುಂಡರಿಸಿ, ಕೋವಿಡ್- 19 ವೈರಾಣುವಿನ ಹರಡುವಿಕೆಯನ್ನು ತಗ್ಗಿಸಿ ಜಿಲ್ಲೆಯ ಜನರು ಕೋವಿಡ್-19ರ ಬಾಧೆಗೆ ಒಳಗಾಗದಂತೆ ತಡೆಯಲು ಆಗಸ್ಟ್ 5ರ ಗುರುವಾರದಿಂದ, ಕೋವಿಡ್-19 ಪಾಸಿಟಿವ್ ವ್ಯಕ್ತಿಗಳನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ಯಾರಂಟೈನ್ (ಕೋವಿಡ್ ಕೇರ್ ಸೆಂಟರ್) ಗೆ ಸ್ಥಳಾಂತರಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಅಂತಹ ರೋಗಿಗಳ ಸ್ಥಳಾಂತರವನ್ನು ತಡೆಯುವ, ರೋಧಿಸುವ, ಪ್ರತಿರೋಧಿಸುವ ಯಾವುದೇ ವ್ಯಕ್ತಿಯ ಅಥವಾ ರೋಗಿಯ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ 2020 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗರ್ಭಿಣಿಯರು, ಅಶಕ್ತರು ಹಾಗೂ ಇತರ ವಿಶೇಷ ಪ್ರಕರಣಗಳಿದ್ದಲ್ಲಿ, ಅಂತಹ ವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ನೀಡುವ ಬಗ್ಗೆ ಸಂಬಂಧಿಸಿದ ತಹಶೀಲ್ದಾರರು ಹಾಗೂ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.