ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ: ಶ್ರೀನಿವಾಸ ಪ್ರಸಾದ್

ಮೈಸೂರು, ಆ.6: ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೇ ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆ ಬೇರೆಯಾದ ಕಾರಣ ಮತ್ತೆ ಸ್ಪರ್ಧೆ ಮಾಡಿದೆ. ಮುಂದೆ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ ಎಂದು ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದ್ದಾರೆ.
50 ವರ್ಷಗಳ ನನ್ನ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗಲಿದೆ. ರಾಜಕೀಯ ಜೀವನದ ಎಲ್ಲ ಏಳುಬೀಳುಗಳನ್ನು ದಾಖಲಿಸಿದ್ದೇನೆ ಎಂದರು.
ಶ್ರೀನಿವಾಸ ಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ಶಾಸಕ ಎನ್.ಮಹೇಶ್ ಅವರು ಪ್ರಸಾದ್ ಅವರನ್ನು ಭೇಟಿಯಾಗಿ ಶುಭ ಕೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್, ಬಿಎಸ್ಪಿ ನನ್ನ ತಾಯಿ ಪಕ್ಷ ಎಂದು ಹೇಳಿದ್ದೆ. ಆದರೆ ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು. ಮಗ ಅನಾಥನಾಗಿದ್ದ, ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದರು.
ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನ ಬಿಎಸ್ಪಿ ಪಕ್ಷ ಕಟ್ಟಲು ಬಳಸಿ ಎಂದು ಸಲಹೆ ನೀಡಿದರು. ಬಿಜೆಪಿ ಸೇರುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಇದರಿಂದ ನನ್ನ ಮತ ಬ್ಯಾಂಕ್ ಕೈ ತಪ್ಪುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.







