ಉಡುಪಿ; ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಪಿಡಿಒ ಅಕ್ರಮ ಕಟ್ಟಡ ನಿರ್ಮಾಣ: ಆರೋಪ
ಲೋಕಾಯುಕ್ತ ತನಿಖೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಾಮಾಜಿಕ ಕಾರ್ಯಕರ್ತ ಒತ್ತಾಯ
![ಉಡುಪಿ; ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಪಿಡಿಒ ಅಕ್ರಮ ಕಟ್ಟಡ ನಿರ್ಮಾಣ: ಆರೋಪ ಉಡುಪಿ; ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಪಿಡಿಒ ಅಕ್ರಮ ಕಟ್ಟಡ ನಿರ್ಮಾಣ: ಆರೋಪ](https://www.varthabharati.in/sites/default/files/images/articles/2021/08/6/301596-1628254329.jpg)
ಉಡುಪಿ, ಆ.6: ಪೆರ್ಡೂರು ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವ ಹೆಬ್ರಿ ಹಾಗೂ ಮುದ್ರಾಡಿ ಗ್ರಾಪಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೆಗಾರ್ ವಿರುದ್ಧ ಹೆಬ್ರಿ ವಲಯ ಅರಣ್ಯಾಧಿಕಾರಿ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ಅಮಾನತುಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆರ್ಡೂರು ಗ್ರಾಮದ ನಿವಾಸಿಯಾಗಿರುವ ಸದಾಶಿವ ಸೇರ್ವೆಗಾರ್ ಪೆರ್ಡೂರು ಗ್ರಾಮದ ಸರ್ವೆ ನಂಬ್ರ 296 ಕೊಪ್ಪಿದ ಅರಣ್ಯ ಇಲಾಖೆಗೆ ಸೇರಿರುವ ಜಾಗದಲ್ಲಿ ಅಕ್ರಮ ಕಟ್ಟಡವನ್ನು ನಿರ್ಮಿಸುತ್ತಿದ್ದು, ಅದರ ಬಗ್ಗೆ ಈಗಾಗಲೇ ಪೆರ್ಡೂರು ಗ್ರಾಪಂಗೆ ಸಾಮಾಜಿಕ ಕಾರ್ಯಕರ್ತರೊಬ್ಬರ ಲಿಖಿತ ದೂರು ಸಲ್ಲಿಸಿದ್ದಾರೆ ಎಂದರು.
ದಾಖಲೆಗಳನ್ನು ಪರಿಶೀಲಿಸಿದಾಗ ಪಿಡಿಒ ಸರ್ವೆ ನಂಬ್ರ 73/3ರಲ್ಲಿ ಕಟ್ಟಡ ನಿರ್ಮಿಸಲು ಪರವಾನಿಗೆಯನ್ನು ಪಡೆದುಕೊಂಡಿರುವುದು ಕಂಡು ಬಂದಿದೆ. ಆದರೆ ಇವರು ಸರಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಕಟ್ಟಡವನ್ನು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸುತ್ತಿದ್ದಾರೆ. ಈ ಸರಕಾರಿ ಜಾಗದಲ್ಲಿ ನಿರ್ಮಿಸುತ್ತಿರುವ ಅಕ್ರಮ ಕಟ್ಟಡಕ್ಕೆ ಅವರದೇ ಹೆಸರಿನ ದಾಖಲೆಗಳನ್ನು ಸಲ್ಲಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆದು ಬಿಲ್ ಪಾವತಿ ಮಾಡುತ್ತ ಬರುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಅರಣ್ಯ ಸಚಿವರಿಗೂ ದೂರು ಸಲ್ಲಿಸಲಾಗುವುದು. ಸದಾಶಿವ ಸೇರ್ವೆಗಾರ್ರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸದಾಶಿವ ಸೇರ್ವೆಗಾರ್ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಹಾಗೂ ಮುದ್ರಾಡಿ ಗ್ರಾಪಂನಲ್ಲಿ ಹಲವಾರು ಅಕ್ರಮಗಳನ್ನು ಎಸಗಿರುವ ಬಗ್ಗೆ ಸಾರ್ವ ಜನಿಕ ವಲಯಗಳಲ್ಲಿ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಅದರ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಲೋಕಾಯುಕ್ತರಿಗೂ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪ್ರಮೋದ್, ಅರುಣ್, ಶಾಹೀಲ್ ರಹ್ಮತ್ ಉಪಸ್ಥಿತರಿದ್ದರು.
ಕ್ರಮಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ
ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಕಟ್ಟಡಕ್ಕೆ ಹಣ ಯಾವ ಮೂಲದಿಂದ ಬಂತು ಎಂಬ ಬಗ್ಗೆಯೂ ಲೋಕಾಯುಕ್ತ ಇಲಾಖೆ ತನಿಖೆ ಮಾಡಬೇಕಾಗಿದೆ. ಇದನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇರ್ವೆಗಾರ್ ರನ್ನು ಕೂಡಲೇ ಸೇವೆಯಿಂದ ಅಮಾನತು ಗೊಳಿಸಬೇಕು. ಇಲ್ಲವಾದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಗ್ರಾಪಂ ಮುಂದೆ ಹಾಗೂ ತಹಶೀಲ್ದಾರ್ ಕಚೇರಿಯ ಮುಂದೆ ಏಕಕಾಲದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
![](https://www.varthabharati.in/sites/default/files/images/galllery/2021/08/6/UD-A6 PDO.jpg)