ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ಅಭಿಯಾನ: ಸಚಿವ ಸುನೀಲ್ ಕುಮಾರ್

ಉಡುಪಿ, ಆ.6: ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು, ಎಂಎಲ್ಸಿ ಹಾಗೂ ಸಂಸದರ ಮಧ್ಯೆ ಯಾವುದೇ ಹೊಂದಾಣಿಕೆ ಕೊರತೆ ಇಲ್ಲ. ನಾವೆಲ್ಲರು ನಮ್ಮ ಜವಾಬ್ದಾರಿಯನ್ನು ಉಡುಪಿ ಜಿಲ್ಲೆಯ ಅಭಿವೃದ್ಧಿಯ ಅಭಿಯಾನಕ್ಕೆ ಬಳಸ ಬೇಕಾಗಿದೆ. ಈ ಮೂಲಕ ಹಿಂದಿನ ಜಿಲ್ಲೆಯ ಅಭಿವೃದ್ಧಿ ಅಭಿಯಾನವನ್ನು ಮುಂದುವರೆಸಲಾಗುವುದು ಎಂದು ನೂತನ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ರಾಜ್ಯದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅಂಬಾಗಿಲು ಅಮೃತ್ ಗಾರ್ಡನ್ನಲ್ಲಿ ಹಮ್ಮಿ ಕೊಳ್ಳಲಾದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮುಖ್ಯಮಂತ್ರಿ ನೀಡುವ ಯಾವುದೇ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಲಾಗುವುದು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಂದಾಗಿ ಒಟ್ಟಾಗಿ ನಮ್ಮಲ್ಲಿರುವ ಎಲ್ಲ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಮುಖಂಡರಾದ ಬಿ.ಎನ್.ಶಂಕರ ಪೂಜಾರಿ, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರ್ ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಇದಕ್ಕೂ ಮೊದಲು ಸಚಿವರನ್ನು ಪರ್ಕಳದಲ್ಲಿ ಸ್ವಾಗತಿಸಿ ವಾಹನ ರ್ಯಾಲಿ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.
ಸಭೆಯಲ್ಲಿ ಐವರು ಶಾಸಕರ ಸಹಿ ಚರ್ಚೆ!
ಅಭಿನಂದನಾ ಸಮಾರಂಭದಲ್ಲಿ ಸಚಿವ ಸುನೀಲ್ ಕುಮಾರ್ ಉಲ್ಲೇಖ ಮಾಡಿದ ಜಿಲ್ಲೆಯ ಐವರೂ ಶಾಸಕರು ಒಟ್ಟಾಗಿ ಸಹಿ ಹಾಕುವ ವಿಚಾರ ಹಾಗೂ ಅದಕ್ಕೆ ಕೋಟ ಶ್ರೀನಿವಾಸ ಪೂಜಾರಿಯ ಹಾಸ್ಯ ರೀತಿಯಲ್ಲಿ ಪ್ರತಿಕ್ರಿಯೆ ಸಭೆ ಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಸುನೀಲ್ ಕುಮಾರ್ ಮಾತನಾಡಿ, ನಮ್ಮಲ್ಲಿ ಯಾವುದೇ ಹೊಂದಾಣಿಕೆ ಕೊರತೆ ಇಲ್ಲ. ವಿಧಾನಸಭೆಯಲ್ಲಿ ಜಿಲ್ಲಾ ಮಟ್ಟದ ವಿಚಾರ ಬಂದಾಗ ನಾವು ಐವರು ಶಾಸಕರೂ ಒಂದೇ ಲೆಟೆರ್ ಹೆಡ್ನಲ್ಲಿ ಸಹಿ ಹಾಕಿರುತ್ತೇವೆ. ಇಂತಹ ಹೊಂದಾಣಿಕೆ ರಾಜ್ಯದ ಯಾವುದೇ ಜಿಲ್ಲೆಗಳಿಲ್ಲ ಎಂದರು.
ಈ ಮಾತಿಗೆ ವೇದಿಕೆಯಲ್ಲಿದ್ದ ಕೋಟ ಶ್ರೀನಿವಾಸ ಪೂಜಾರಿ, ಹಾಸ್ಯವಾಗಿ ಪ್ರತಿಕ್ರಿಯಿಸಿದರು. ಅದನ್ನು ಅರ್ಥ ಮಾಡಿಕೊಂಡ ವೇದಿಕೆಯಲ್ಲಿದ್ದವರು ಹಾಗೂ ಮುಂಭಾಗದಲ್ಲಿದವರು ನಕ್ಕರು. ‘ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಬಾರದೆಂದು ಜಿಲ್ಲೆಯ ಐವರೂ ಶಾಸಕರು ಕೂಡ ಒಂದೇ ಲೆಟರ್ ಹೆಡ್ ನಲ್ಲಿ ಸಹಿ ಹಾಕಿದ್ದರು’ ಎಂಬುದು ಕೋಟ ಅವರ ಪ್ರತಿಕ್ರಿಯೆ ಆಗಿತ್ತು ಎಂದು ಸಭೆಯಲ್ಲಿ ಭಾರೀ ಚರ್ಚೆಗಳು ನಡೆದವು.
ಇದಕ್ಕೆ ಸುನೀಲ್ ಕುಮಾರ್, ‘ಮುಂದಿನ ದಿನಗಳಲ್ಲಿ ಶ್ರೀನಿವಾಸ ಪೂಜಾರಿ ಸಹಿ ಕೂಡ ಹಾಕಿಸಿಕೊಳ್ಳುತ್ತೇವೆ ಚಿಂತಿಸಬೇಡಿ ನೀವು’ ಎಂದು ಪ್ರತಿಕ್ರಿಯಿಸಿದರು. ಈ ವಿಚಾರವನ್ನು ಮತ್ತೆ ಮತ್ತೆ ಎಲ್ಲರನ್ನು ಕರೆದು ಹೇಳುತ್ತಿದ್ದ ಕೋಟ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಡೆಯುತ್ತಿರುವುದು ಕೂಡ ಕಂಡುಬಂತು.
ಇದಕ್ಕೆ ಪುಷ್ಠಿ ಕೊಡುವಂತೆ ಈ ಮೊದಲು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಎರಡನೇ ಬಾರಿಗೆ ಯಡಿಯೂರಪ್ಪ ನನಗೆ ಮತ್ತೆ ಮಂತ್ರಿಯಾಗಿ ಅವಕಾಶ ಮಾಡಿಕೊಟ್ಟರು. ಆಗ ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಆಗಬೇಕಿತ್ತು. ಆದರೆ ಬೇರೆ ಬೇರೆ ಕಾರಣದಿಂದ ನನಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಅವಕಾಶ ಸಿಕ್ಕಿತ್ತು ಎಂದು ತಿಳಿಸಿದರು.









