ನನಗೆ ಬಿಎಸ್ಪಿ ಪಕ್ಷದಿಂದ ಮೋಸ ಆಗಿದೆ: ಶಾಸಕ ಎನ್.ಮಹೇಶ್

ಮೈಸೂರು,ಆ.6: ನನ್ನಿಂದ ಬಹುಜನ ಸಮಾಜವಾದಿ ಪಕ್ಷಕ್ಕೆ ಮೋಸವಾಗಿಲ್ಲ, ನನಗೇ ಬಿಎಸ್ಪಿ ಯಿಂದ ಮೋಸವಾಗಿದೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.
ಬಿಜೆಪಿಗೆ ಸೇರ್ಪಡೆಗೊಂಡ ನಂತರ ಶುಕ್ರವಾರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಆಗಮಿಸಿ ಶುಭಾಶಯ ಕೋರಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಎಸ್ ಪಿ ನನ್ನ ತಾಯಿ ಪಕ್ಷ ಎಂದು ಹೇಳಿದ್ದೆ. ಆದರೆ ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು. ಮಗ ಅನಾಥನಾಗಿದ್ದ, ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದು ಹೇಳಿದರು.
ನನ್ನನ್ನು ಟ್ರೋಲ್ ಮಾಡುತ್ತಿರುವವರು ಯಾರೆಂಬುದು ನನಗೆ ಗೊತ್ತಿದೆ. ಬಿಎಸ್ ಪಿ ಗೆಳೆಯರಿಗೆ ನಾನು ಹೇಳುವುದಿಷ್ಟೇ ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿಎಸ್ಪಿ ಪಕ್ಷ ಕಟ್ಟಲು ಬಳಸಿ. ನನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ಮಲೆ ಮಹದೇಶ್ವರ ಸ್ವಾಮಿ ಒಳೆಯದನ್ನು ಮಾಡಲಿ ಎಂದು ಹೇಳಿದರು.
ಆವತ್ತಿನ ರಾಜಕೀಯ ಸಂದರ್ಭದಲ್ಲಿ ಹೇಳಿದ ಮಾತನ್ನು ಇವತ್ತಿನ ನೆಲೆಯಲ್ಲಿ ನಿಂತು ನೋಡಬಾರದು. ಹೋರಾಟಗಳ ವೇಳೆ ಹೇಳಿದ ಮಾತೇ ಬೇರೆ. ಅಧಿಕಾರ ಸ್ಥಾನಗಳಿಗೆ ಬಂದಾಗಿನ ಮಾತೇ ಬೇರೆ ಎಂಬುದು ನನಗೆ ಅರ್ಥವಾಗಿದೆ. ನಮ್ಮ ಮತ ಬ್ಯಾಂಕ್ ಯಾವುದೂ ನಮ್ಮನ್ನು ಬಿಟ್ಟು ಹೋಗಿಲ್ಲ. ನನಗೆ ಬಿಜೆಪಿ ಸೇರುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಕಾಂಗ್ರೆಸ್ ನಲ್ಲಿ ಯಾವುದೇ ಸ್ಥಾನಗಳಿಲ್ಲ. ಇದಿಲ್ಲದಿದ್ದರೆ ಚುನಾವಣಾ ರಾಜಕಾರಣ ಬಿಡಬೇಕಿತ್ತು. ಹೀಗಾಗಿ ಬಿಜೆಪಿ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.







