ನಾನು ಯಾವತ್ತೂ ಪವರ್ ಫುಲ್ : ಇಂಧನ ಸಚಿವ ಸುನೀಲ್ ಕುಮಾರ್
![ನಾನು ಯಾವತ್ತೂ ಪವರ್ ಫುಲ್ : ಇಂಧನ ಸಚಿವ ಸುನೀಲ್ ಕುಮಾರ್ ನಾನು ಯಾವತ್ತೂ ಪವರ್ ಫುಲ್ : ಇಂಧನ ಸಚಿವ ಸುನೀಲ್ ಕುಮಾರ್](https://www.varthabharati.in/sites/default/files/images/articles/2021/08/7/301707-1628330725.jpeg)
ಉಡುಪಿ, ಆ.7: ‘ನಾನು ಯಾವತ್ತೂ ಪವರ್ ಫುಲ್...’ ಹೀಗೆಂದು ನೂತನ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಯುವಕರಾಗಿರುವುದರಿಂದ ಪವರ್ ಫುಲ್ ಆಗಿ ನಿರ್ವಹಿಸುತ್ತೀರಿ ಎಂಬ ಕಾರಣಕ್ಕೆ ಪವರ್ ಖಾತೆ ನೀಡಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವರು ಈ ರೀತಿ ಪ್ರತ್ರಿಕ್ರಿಯಿಸಿದರು.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತ್ರವಲ್ಲ ಡಿ.ಕೆ.ಶಿವಕುಮಾರ್, ಶೋಭಾ ಕರಂದ್ಲಾಜೆ ನಿಭಾಯಿಸಿದ ಇಂಧನ ಖಾತೆಯನ್ನು ನನಗೆ ನೀಡಲಾಗಿದೆ. ಬಹಳ ದೊಡ್ಡ ಸವಾಲು ಇದೆ. ಆದರೆ ಅದರ ನಿರ್ವಹಣೆ ನನಗೆ ಕಷ್ಟ ಆಗಲ್ಲ. ಅದನ್ನು ಸವಾಲಿನ ರೂಪದಲ್ಲಿ ಸ್ವೀಕರಿಸುತ್ತೇನೆ ಎಂದರು.
ಪಕ್ಷ ಸಚಿವನಾಗಿ ಹಾಗೂ ಮುಖ್ಯಮಂತ್ರಿಗಳು ಪ್ರಮುಖ ಇಲಾಖೆ ನೀಡುವ ಮೂಲಕ ಬಹಳ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ತಜ್ಞರ ಜೊತೆ ಮಾತುಕತೆ ನಡೆಸಿ ಇಲಾಖೆಯಲ್ಲಿ ಹೊಸತನ ಹಾಗೂ ಸುಧಾರಣೆಯನ್ನು ತರುವ ಕೆಲಸವನ್ನು ಮಾಡುತ್ತೇನೆ. ಪವರ್ನಲ್ಲಿ ಪವರನ್ನು ಹೇಗೆ ತೋರಿಸಿದ್ದೇನೆ ಎಂದು ಎರಡು ವರ್ಷ ಬಿಟ್ಟ ನಂತರ ಹೇಳುತ್ತೇನೆ ಎಂದು ತಿಳಿಸಿದರು.
ಯಾವುದೇ ಒತ್ತಡ ಹೇರಿಲ್ಲ
ಖಾತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿರೀಕ್ಷೆ, ಬೇಡಿಕೆ, ಒತ್ತಾಯ, ಒತ್ತಡವನ್ನು ಮುಖ್ಯಮಂತ್ರಿಗೆ ಹಾಕಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಅವರಲ್ಲಿ ಯಾವುದೇ ಹೊಣೆಗಾರಿಕೆ ನೀಡಿದರೂ ನಿರ್ವಹಿಸುತ್ತೇನೆ ಹಾಗೂ ಪಕ್ಷ ಮತ್ತು ಸರಕಾರಕ್ಕೆ ಒಳ್ಳೆಯ ಹೆಸರು ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದೇನೆ. ಪಕ್ಷದ ಹಿರಿಯರು ಮುತ್ತು ಮುಖ್ಯಮಂತ್ರಿ ಗಳು ನನಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಅದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ಸಚಿವರು ತಿಳಿಸಿದರು.
ಆಡಳಿತದಲ್ಲಿ ಇನ್ನಷ್ಟು ಹೊಸತನ ಹಾಗೂ ಚುರುಕುತನ ಮೂಡಿಸುವ ನಿಟ್ಟಿನಲ್ಲಿ ಹೊಸ ಖಾತೆಯನ್ನು ಹೊಸ ಸಚಿವರಿಗೆ ನೀಡಲಾಗಿದೆ. ಆ ಮೂಲಕ ಮೋದಿ ಮಾದರಿಯ ಆಡಳಿತವನ್ನು ಇಲ್ಲಿ ಕೂಡ ವಿಜೃಂಭಿಸುವಬೇಕಾಗಿದೆ. ಅದರಂತೆ ಇನ್ನಷ್ಟು ಹೊಸತನ ನಿರ್ಮಾಣ ಮಾಡುವ ಪ್ರಯತ್ನವನ್ನು ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಮಾಡಲಾಗುವುದು ಎಂದು ಅವರು ಹೇಳಿದರು.
ನಿರೀಕ್ಷೆಗೆ ಮೀರಿದ ದೊಡ್ಡ ಹಾಗೂ ಜನರಿಗೆ ಅಗತ್ಯವಾದ ಇಂಧನ ಖಾತೆ ಯನ್ನು ನನಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಪವರ್ ನಿರ್ಮಾಣ ಮಾಡುವುದು ಹಾಗೂ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವಂತಹ ಎರಡು ಇಲಾಖೆಗಳು ನನ್ನ ಬಳಿ ಇವೆ. ಹಿರಿಯರ ಹಾಗೂ ತಜ್ಞರ ಸಹಕಾರ ಪಡೆದು ಕೊಂಡು ಈ ಖಾತೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತೇನೆ ಎಂದು ಅವರು ಹೇಳಿದರು.
ತುಳುವಿಗೆ ರಾಜ್ಯಭಾಷೆ ಸ್ಥಾನಮಾನಕ್ಕೆ ಪ್ರಯತ್ನ
ತುಳುವಿಗೆ ರಾಜ್ಯಭಾಷೆಯ ಸ್ಥಾನಮಾನ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇವೆ. ಇದರ ತೊಡಕುಗಳನ್ನು ತಿಳಿದು ಇನ್ನು ಯಾವ ರೀತಿ ಒತ್ತಡ ತರಬೇಕು ಎಂದು ಚರ್ಚಿಸಿ ಸ್ಥಾನಮಾನ ಕೊಡಿಸುವ ಪ್ರಯತ್ನ ಮಾಡಲಾಗು ವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ನೆಲ, ಜಲ, ಭಾಷೆ ವಿಚಾರ ಬಂದಾಗ ನಾವು ಯಾವತ್ತೂ ರಾಜಿಯನ್ನು ಮಾಡಿಕೊಂಡಿಲ್ಲ. ತುಳು ಸಂಸ್ಕೃತಿಗೆ ವಿಶೇಷ ಒತ್ತನ್ನು ನೀಡುತ್ತೇವೆ. ಭಾಷೆ ಮತ್ತು ಸಂಸ್ಕೃತಿ ಎರಡೂ ಒಟ್ಟಾಗಿ ಸಾಗಬೇಕಾಗಿದೆ. ಭಾಷೆಯೊಳಗೆ ಸಂಸ್ಕೃತಿ ಹಾಗೂ ಸಂಸ್ಕೃತಿಯೊಳಗೆ ಭಾಷೆ ಅಡಗಿದೆ. ಇವು ಎರಡನ್ನು ಸಮಾತೋಲನ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದರು.