ಉಡುಪಿ: ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕಳವು
ಉಡುಪಿ, ಆ.7: ಉಡುಪಿ ನಗರದ ಕೆಎಂ ರಸ್ತೆಯ ಬಳಿ ನಿಲ್ಲಿಸಿದ ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕಳವು ಮಾಡಿರುವ ಘಟನೆ ಆ.6ರಂದು ಸಂಜೆ ವೇಳೆ ನಡೆದಿದೆ.
ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರಾ ಶೆಟ್ಟಿ ಎಂಬವರು ಆ.6ರಂದು ತನ್ನ ಸ್ನೇಹಿತ ಶ್ರೀನಿವಾಸ್ ಭಟ್ ಎಂಬವರ ಕಾರಿನಲ್ಲಿ ಕೊಲ್ಲೂರು, ಕಟೀಲು, ಮಂಗಳೂರಿನ ದೇವಸ್ಥಾನಕ್ಕೆ ಹೋಗಿ ಸಂಜೆ ಉಡುಪಿಗೆ ಬಂದಿದ್ದರೆನ್ನಲಾಗಿದೆ. ನಗರದ ಕೆಎಂ ರಸ್ತೆಯ ಬಳಿ ಕಾರನ್ನು ಪಾರ್ಕ್ ಮಾಡಿ ಹೊಟೇಲಿಗೆ ಊಟ ಪಾರ್ಸೆಲ್ ತರಲು ಹೋಗಿದ್ದರು.
ಕೆಲವೇ ನಿಮಿಷದಲ್ಲಿ ವಾಪಾಸು ಬಂದು ನೋಡಿದಾಗ ಕಳ್ಳರು ಕಾರಿನ ಹಿಂಬದಿಯ ಎಡಭಾಗದ ಗ್ಲಾಸ್ ಅನ್ನು ಒಡೆದು ಒಳಗಿದ್ದ 70ಸಾವಿರ ರೂ. ಮೌಲ್ಯದ ಲ್ಯಾಪ್ಟಾಪ್ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





