ಕಳಸ: ಲಾರಿಗೆ ತಗುಲಿದ ವಿದ್ಯುತ್ ತಂತಿ: ಯುವಕ ಮೃತ್ಯು
ಚಿಕ್ಕಮಗಳೂರು, ಆ.8: ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿದ್ದರಿಂದ ಲಾರಿ ಕ್ಲೀನರ್ ಮೃತಪಟ್ಟ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಹೊಳೆ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಮೃತರನ್ನು ತರೀಕೆರೆ ಪಟ್ಟಣದ ನಿವಾಸಿ ರಫೀಕ್(35) ಎಂದು ಗುರುತಿಸಲಾಗಿದೆ.
ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಹೊಳೆಯ ಪಡೀಲ್ ಎಂಬಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಹತ್ತು ಚಕ್ರಗಳ ಚಲಿಸುತ್ತಿದ್ದ ಲಾರಿಗೆ ರಸ್ತೆ ಬದಿಯ ವಿದ್ಯುತ್ ತಂತಿ ಆಕಸ್ಮಿಕವಾಗಿ ಸ್ಪರ್ಶಿಸಿದೆ. ಇದನ್ನು ಅರಿತ ಚಾಲಕ ತಕ್ಷಣ ಲಾರಿಯಿಂದ ಹೊರಗೆ ಹಾರಿ ಪಾರಾಗಿದ್ದಾರೆ. ಕಾಲಿಗೆ ಶೂ ಧರಿಸಿದ್ದರಿಂದ ಅವರು ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ ಕ್ಲೀನರ್ ರಫೀಕ್ ಬರಿಗಾಲಲ್ಲಿ ಇದ್ದರಲ್ಲದೆ, ಲಾರಿಯಿಂದ ಕೆಳಗಿಳಿಯುವ ವೇಳೆ ಕಬ್ಬಿಣದ ಭಾಗವನ್ನು ಸ್ಪರ್ಶಿಸಿದ್ದರಿಂದ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಲಾರಿಯಲ್ಲಿ ಸಿಮೆಂಟ್ ಸಾಗಣೆ ಮಾಡಲಾಗುತ್ತಿತ್ತು.
ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ಹರ್ಷವರ್ಧನ್ ಹಾಗೂ ಸಿಬ್ಬಂದಿ ಉಮೇಶ್, ಪ್ರದೀಪ್ ಹಾಗೂ ಸಿಬ್ಬಂದಿ, ಆ್ಯಂಬುಲೆನ್ಸ್ ಚಾಲಕ ಶರೀಫ್ ಲಾರಿಯಿಂದ ಮೃತದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.