ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ವಂ.ಚೇತನ್ ಲೋಬೊ ಆಯ್ಕೆ
ಉಡುಪಿ, ಆ.10: ಕಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಸಮಿತಿಯ ವತಿಯಿಂದ ನೀಡಲಾಗುವ 2021ರ ಸಾಲಿನ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಚೇತನ್ ಲೋಬೊ ಅವರ ‘ಚೇತನ ಚಿಂತನ’ ಕೃತಿ ಆಯ್ಕೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರಿನವರಾಗಿದ್ದು, ಸಂವಹನ ಹಾಗೂ ಮಾಧ್ಯಮಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಇವರು ಕಪುಚಿನ್ ಸಭೆಗೆ ಸೇರಿದ ಧರ್ಮಗುರುಗಳಾಗಿದ್ದಾರೆ. ಶಿವಮೊಗ್ಗ ಧರ್ಮಕ್ಷೇತ್ರದ ಕುಟುಂಬ ವಿಕಾಸ ಕೇಂದ್ರದ ನಿರ್ದೇಶಕರಾಗಿ, ಕಪುಚಿನ್ ಶಿಕ್ಷಣ ಮಂಡಳಿ ಬೆಂಗಳೂರು ಇದರ ಕಾರ್ಯದರ್ಶಿಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಕುಟುಂಬ ವಿಕಾಸ ಕೇಂದ್ರದ ನಿರ್ದೇಶಕರಾಗಿ, ಉಡುಪಿ ಧರ್ಮಪ್ರಾಂತ್ಯದ ಕೊಂಕಣಿ ಪಾಕ್ಸಿಕ ಉಜ್ವಾಡ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಪುರಸ್ಕಾರ 25,000ರೂ. ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದ್ದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಸಮಿತಿ ಸಂಚಾಲಕಿ ಆಲಿಸ್ ರೊಡ್ರಿಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.