ಖಾಸಗಿ ಬಸ್ ದರ ಏರಿಕೆ ತಡೆಗೆ ಒಕ್ಕೊರಲ ಆಗ್ರಹ: ದ.ಕ. ಜಿಲ್ಲಾಧಿಕಾರಿಗೆ ಮನವಿ
![ಖಾಸಗಿ ಬಸ್ ದರ ಏರಿಕೆ ತಡೆಗೆ ಒಕ್ಕೊರಲ ಆಗ್ರಹ: ದ.ಕ. ಜಿಲ್ಲಾಧಿಕಾರಿಗೆ ಮನವಿ ಖಾಸಗಿ ಬಸ್ ದರ ಏರಿಕೆ ತಡೆಗೆ ಒಕ್ಕೊರಲ ಆಗ್ರಹ: ದ.ಕ. ಜಿಲ್ಲಾಧಿಕಾರಿಗೆ ಮನವಿ](https://www.varthabharati.in/sites/default/files/images/articles/2021/08/10/302119-1628615154.jpg)
ಮಂಗಳೂರು, ಆ.10: ಖಾಸಗಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ, ದ.ಕ. ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರ ವಿರೋಧಿಸಿ ಜಾತ್ಯತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ನಿಯೋಗವು, ‘ಸಾರಿಗೆ ಪ್ರಾಧಿಕಾರದ ಸಭೆ ಕರೆಯದೆ ಏಕಾಏಕಿ ಬಸ್ ಪ್ರಯಾಣ ದರ ಏರಿಸಿದ್ದು ಸರ್ವರ್ಥನೀಯವಲ್ಲ. ಕೊರೋನ ಸಂಕಷ್ಟದಲ್ಲಿ ಜಿಲ್ಲೆಯ ಲಕ್ಷಾಂತರ ಜನತೆ ಉದ್ಯೋಗವಿಲ್ಲದೆ ಆರ್ಥಿಕ ಸಮಸ್ಯೆಯಿಂದ ತೀವ್ರವಾಗಿ ಕಂಗೆಟ್ಟಿದ್ದಾರೆ. ಜಿಲ್ಲಾಧಿಕಾರಿ ಕೇವಲ ನೂರಾರು ಸಂಖ್ಯೆಯಲ್ಲಿರುವ ಬಸ್ ಮಾಲಕರ ನೋವಿಗೆ ಸ್ಪಂದಿಸುವ ನೆಪದಲ್ಲಿ ಸಾರಿಗೆ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಎಷ್ಟು ಸರಿ’ ಎಂದು ಮನವಿಯಲ್ಲಿ ಪ್ರಶ್ನಿಸಿದೆ.
ಈ ಸಂದರ್ಭ ಬಸ್ ದರ ಏರಿಕೆ ತಡೆ ಹಿಡಿದು, ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕು. ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ, ನೀರಜ್ ಪಾಲ್, ಸಿಪಿಎಂ ನಾಯಕರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಸಿಪಿಐ ಮುಖಂಡರಾದ ಕರುಣಾಕರ್, ಜಗತ್ಪಾಲ್, ಜಾತ್ಯತೀತ ಜನತಾದಳದ ಮುಖಂಡರಾದ ಸುಮತಿ ಎಸ್ ಹೆಗ್ಡೆ, ಅಲ್ತಾಫ್ ತುಂಬೆ, ಡಿವೈಎಫ್ಐ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ದಲಿತ ಸಂಘಟನೆಗಳ ನಾಯಕರಾದ ಎಂ.ದೇವದಾಸ್, ರಘು ಎಕ್ಕಾರು, ತಿಮ್ಮಯ್ಯ ಕೊಂಚಾಡಿ ಉಪಸ್ಥಿತರಿದ್ದರು.