ದೇಶದ ಸ್ವಾತಂತ್ರಕ್ಕಾಗಿ ಹಂಬಲಿಸಿ ಪ್ರಾಣಾರ್ಪಣೆ ಮಾಡಿದ ಖುದಿರಾಮ್ ಬೋಸ್
ಇಂದು ಖುದಿರಾಮ್ ಬೋಸ್ ಹುತಾತ್ಮರಾದ ದಿನ
ಅದೊಂದು ನ್ಯಾಯಾಲಯದ ಸನ್ನಿವೇಶ ಅಪರಾಧಿ ಸ್ಥಾನದಲ್ಲಿ ಯುವಕನೊಬ್ಬನಿದ್ದಾನೆ ಮ್ಯಾಜಿಸ್ಟ್ರೇಟ್ ತೀರ್ಪು ನೀಡಿದ್ದಾರೆ. ತೀರ್ಪು ಗಲ್ಲುಶಿಕ್ಷೆ! ಯುವಕ ಮುಗುಳ್ನಕ್ಕ! ಆಶ್ಚರ್ಯಚಕಿತರಾದ ಮ್ಯಾಜಿಸ್ಟ್ರೇಟ್ ಮತ್ತೆ ಕೇಳಿದರು. ‘‘ನಿನ್ನ ಕೊನೆಯಾಸೆಯೇನು?’’ ಉತ್ತರಿಸಿದ ಯುವಕ ‘‘ನನಗೆ ಇನ್ನೊಂದಿಷ್ಟು ಸಮಯಾವಕಾಶವಿದ್ದಿದ್ದರೆ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸಲು ಬಾಂಬ್ ತಯಾರಿಸುವುದನ್ನು ನಿಮಗೂ ಹೇಳಿಕೊಡುತ್ತಿದ್ದೆ!’’ ಈ ಯುವಕ ಮತ್ಯಾರೂ ಅಲ್ಲ ಸುಪ್ರಸಿದ್ಧ ಕ್ರಾಂತಿಕಾರಿ ಖುದಿರಾಮ್ ಬೋಸ್.
ಖುದಿರಾಮ್ರು ತ್ರೈಲೋಕ್ಯನಾಥ ಬಸು ಮತ್ತು ಲಕ್ಷ್ಮೀಪ್ರಿಯದೇವಿ ದಂಪತಿಯ ಮಗನಾಗಿ 1889ರ ಡಿಸೆಂಬರ್ 3ರಂದು ಬಂಗಾಳದ ಮಿಡ್ನಾಪುರ್ ಜಿಲ್ಲೆಯ ಹಬೀಬ್ ಪುರ್ನಲ್ಲಿ ಜನಿಸಿದರು. ತನ್ನ 6ನೇ ವಯಸ್ಸಿನಲ್ಲಿ ತಂದೆ-ತಾಯಿಗಳನ್ನು ಕಳೆದುಕೊಂಡು ಅಕ್ಕ ಅನುರೂಪಳ ಆರೈಕೆಯಲ್ಲಿ ಬೆಳೆಯಲಾರಂಭಿಸಿದರು. ಮಿಡ್ನಾಪುರದ ಹಾಮಿಲ್ಟನ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಅಲ್ಲಿನ ಶಿಕ್ಷಕ ಸತ್ಯೇಂದ್ರನಾಥ್ರಿಂದ ಪ್ರಭಾವಿತರಾದರು. ತನ್ನ ಸುತ್ತಮುತ್ತಲಿನ ಜನರು ಬ್ರಿಟಿಷರಿಂದ ಅನುಭವಿಸುತ್ತಿದ್ದ ಶೋಷಣೆಗಳನ್ನು ಹತ್ತಿರದಿಂದ ಕಂಡು ಮನಮರುಗಿದ್ದ ಖುದಿರಾಮ್, ಶೋಷಿತ ಜನರ ವಿಮೋಚನೆಗಾಗಿ ಕ್ರಾಂತಿಕಾರಿ ಹೋರಾಟದ ಹಾದಿಯನ್ನು ಆಯ್ದುಕೊಂಡರು.
ಭಾರತದ ಕ್ರಾಂತಿಕಾರಿ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ ಬಂಗಾಳವನ್ನು ವಿಭಜಿಸಿದರೆ ಜನತೆಯ ಐಕ್ಯತೆಯನ್ನು ಮುರಿದು ಕ್ರಾಂತಿಕಾರಿಗಳ ಹೋರಾಟವನ್ನು ತಡೆಗಟ್ಟಬಹುದು ಎಂಬ ಆಲೋಚನೆಯನ್ನು ಬ್ರಿಟಿಷರು ಹೊಂದಿದ್ದರು. ಅದಕ್ಕನುಗುಣವಾಗಿ 1905ರಲ್ಲಿ ಆಗಿನ ವೈಸ್ರಾಯ್ ಆಗಿದ್ದ ಕರ್ಜನ್ ಬಹುಸಂಖ್ಯಾತ ಹಿಂದೂಗಳ ಪಶ್ಚಿಮ ಪ್ರಾಂತ(ಈಗಿನ ಪಶ್ಚಿಮ ಬಂಗಾಳ), ಬಹುಸಂಖ್ಯಾತ ಮುಸ್ಲಿಮರ ಪೂರ್ವ ಪ್ರಾಂತ(ಈಗಿನ ಬಾಂಗ್ಲಾದೇಶ) ಎಂಬುದಾಗಿ ಬಂಗಾಳವನ್ನು ಇಬ್ಭ್ಬಾಗ ಮಾಡಿದರು. ಅಲ್ಲಿಂದ ಜನತೆಯ ಉಗ್ರ ಪ್ರತಿಭಟನೆ ಆರಂಭವಾಯಿತು.
1906ರ ಫೆಬ್ರವರಿ ತಿಂಗಳಿನಲ್ಲಿ ಬಂಗಾಳದ ಮೇಧನಿಪುರದಲ್ಲಿ ಬ್ರಿಟಿಷರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಉದ್ದೇಶ ಭುಗಿಲೆದ್ದಿದ್ದ ಪ್ರತಿಭಟನೆಯನ್ನು ತಣ್ಣಗಾಗಿಸುವುದು ಮತ್ತು ಭಾರತದಲ್ಲಿ ನಾವು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಪ್ರಚಾರ ಮಾಡುವುದೇ ಆಗಿತ್ತು. ಬ್ರಿಟಿಷರ ಈ ಕುತಂತ್ರದ ವಿರುದ್ಧ ಖುದಿರಾಮರು ‘ಸೋನಾರ್ ಬಾಂಗ್ಲ’ ಎಂಬ ಕರಪತ್ರಗಳನ್ನು ಹಂಚಿ ಭಾರತೀಯರಿಗೆ ವಾಸ್ತವದ ಅರಿವನ್ನು ಮೂಡಿಸುತ್ತಿದ್ದರು. ಇದನ್ನರಿತ ಬ್ರಿಟಿಷರ ಪೊಲೀಸನೊಬ್ಬ ಖುದಿರಾಮನನ್ನು ಬಂಧಿಸಲು ಬಂದಾಗ ‘‘ವಾರಂಟ್ ಇಲ್ಲದೆ ನನ್ನನ್ನು ಬಂದಿಸಲು ಬಂದಿರುವಿರಾ? ನನ್ನನ್ನು ಮುಟ್ಟಿದರೆ ಜೋಕೆ? ಎಂದು ಅಲ್ಲಿಂದ ತಪ್ಪಿಸಿಕೊಂಡರು! ಆನಂತರ ಕ್ರಾಂತಿಕಾರಿ ಮಾರ್ಗದಲ್ಲಿ ಭಾರತವನ್ನು ಸ್ವತಂತ್ರಗೊಳಿಸಬೇಕೆಂಬ ಗುರಿಯನ್ನು ಹೊಂದಿದ್ದ ಖುದಿರಾಮ್ ಬಂಗಾಳದ ಹಲವು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಾ ಹೋದರು.
ಇತ್ತ ಬಂಗಾಳ ವಿಭಜನೆಯ ವಿರುದ್ಧ ಚಳವಳಿ ಬೃಹದಾಕಾರವಾಗಿ ಬೆಳೆಯುತ್ತಲೇ ಹೋಯಿತು. ಕಲ್ಕತ್ತಾ ಪ್ರೆಸಿಡೆನ್ಸಿಯ ಮ್ಯಾಜಿಸ್ಟ್ರೇಟ್ ಕಿಂಗ್ಸ್ ಪೋರ್ಡ್ ಸ್ವಾತಂತ್ರ ಹೋರಾಟಗಾರರಿಗೆ ಅನ್ಯಾಯಯುತವಾದ ಹಾಗೂ ಕ್ರೂರ ಶಿಕ್ಷೆಯನ್ನು ವಿಧಿಸುವುದರಲ್ಲಿ ಕುಖ್ಯಾತನಾಗಿದ್ದ. ಈತನ ವಿರುದ್ಧ ಜನತೆಯ ಆಕ್ರೋಶ ಹೆಚ್ಚುತ್ತಲೇ ಹೋಯಿತು. ಕ್ರಾಂತಿಕಾರಿಗಳ ಗುಂಪು ಈತನನ್ನು ಕೊನೆಗಾಣಿಸಲು ಯೋಜನೆಯನ್ನು ರೂಪಿಸಿತು. ಜನರ ಭಾವನೆಯನ್ನು ಅರಿತ ಬ್ರಿಟಿಷ್ ಸರಕಾರ ಕಿಂಗ್ಸ್ ಪೋರ್ಡ್ನನ್ನು ಬಂಗಾಳದಿಂದ ಬಿಹಾರದ ಮುಝಫ್ಫರ್ಪುರಕ್ಕೆ ವರ್ಗಾವಣೆ ಮಾಡಿತು. ಆದರೆ ಕಿಂಗ್ಸ್ ಪೋರ್ಡ್ನನ್ನು ಕೊನೆಗಾಣಿಸುವ ಕಾರ್ಯವನ್ನು ‘ಯುಗಾಂತರ ಗುಂಪಿ’ನ ನಾಯಕರು ಚರ್ಚಿಸಿ ನಿರ್ಧರಿಸಿದಂತೆ ಖುದಿರಾಮ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಲ ಚಾಕಿಗೆ ವಹಿಸಿದರು.
ಇದು ತನ್ನ ಜೀವನದಲ್ಲಿ ಲಭಿಸಿದ ಶ್ರೇಷ್ಠ ಕಾರ್ಯವೆಂದು ಭಾವಿಸಿದ ಖುದಿರಾಮ್, ಪ್ರಫುಲ್ಲ ಚಾಕಿಯೊಂದಿಗೆ ಮುಝಫ್ಫರ್ಪುರಕ್ಕೆ ತೆರಳಿ ಕಿಂಗ್ಸ್ಪೋರ್ಡ್ ವಾಸವಿದ್ದ ಬೀದಿಯಲ್ಲಿರುವ ಮನೆಯೊಂದರಲ್ಲೇ ಹರೇನ್ ಶಂಕರ್ ಎಂದು ಹೆಸರನ್ನು ಬದಲಿಸಿಕೊಂಡು ವಾಸಿಸತೊಡಗಿದರು. ಕಿಂಗ್ಸ್ಪೋರ್ಡ್ ನ ಚಲನ-ವಲನಗಳನ್ನು ಗಮನಿಸಿ ಯೋಜನೆಯನ್ನು ರೂಪಿಸಿದರು. ಆತ ಸಂಜೆ ಕುದುರೆಗಾಡಿಯಲ್ಲಿ ಯುರೋಪಿಯನ್ ಕ್ಲಬ್ನ ಪೂರ್ವ ದ್ವಾರದ ಮೂಲಕ ಹೊರಟು ಬರುವಾಗ ಬಾಂಬ್ ಹಾಕಲು ನಿರ್ಧರಿಸಿದರು. ಆದರೆ ಅನಿರೀಕ್ಷಿತವಾಗಿ ಆ ಗಾಡಿಯಲ್ಲಿ ಕಿಂಗ್ಸ್ ಪೋರ್ಡ್ನ ಗೆಳೆಯ ಕೆನಡಿಯ ಪತ್ನಿ ಮತ್ತು ಗೆಳತಿ ಮಾತ್ರವಿದ್ದರು. ಇದನ್ನ ರಿಯದೆ ಬಾಂಬ್ ಎಸೆದು, ತಾವು ಕಿಂಗ್ಸ್ ಪೋರ್ಡ್ನನ್ನೇ ಮುಗಿಸಿದೆವೆಂದೆಣಿಸಿ ಪ್ರಫುಲ್ಲ ಒಂದು ಕಡೆ, ಖುದಿರಾಮ್ ಇನ್ನೊಂದು ಕಡೆ ಓಡಿದರು. ಪ್ರಪುಲ್ಲ ತಾನು ಬ್ರಿಟಿಷರ ಪೊಲೀಸರಿಗೆ ಸೆರೆಯಾಗುವುದನ್ನಿಚ್ಛಿಸದೆ ತನಗೆ ತಾನೇ ಗುಂಡಿಟ್ಟುಕೊಂಡ.
ಇತ್ತ ರಾತ್ರಿಯಿಡೀ 22 ಮೈಲಿ ಬರಿಗಾಲಲ್ಲಿ ಓಡಿ ದಣಿದಿದ್ದ ಖುದಿರಾಮ್ ವೈನಿ ರೈಲ್ವೆ ಸ್ಟೇಷನ್ನ ಅಂಗಡಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಈತನ ಕೊಳೆಯಾಗಿದ್ದ ವಸ್ತ್ರ, ಕೈ-ಕಾಲನ್ನು ಕಂಡು ಸಂಶಯಗೊಂಡ ಪೊಲೀಸರು ಖುದಿರಾಮ್ರನ್ನು ಬಂಧಿಸಿದರು. ತದ ನಂತರ ವಿಚಾರಣೆಯೆಂಬ ನಾಟಕ ನಡೆದು ಖುದಿರಾಮ್ಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೂ ಅದನ್ನು ನಿರಾಕರಿಸಿ ದೇಶಕ್ಕೋಸ್ಕರ ಪ್ರಾಣಾರ್ಪಣೆ ಮಾಡಲು ಖುದಿರಾಮ್ ಉತ್ಸುಕತೆ ತೋರಿದರು. ಹಾಗಾಗಿ ಈ ವಿಧಿಯೇ ಅಂತಿಮವಾಯಿತು.
1908ರ ಆಗಸ್ಟ್ 11ರಂದು ಖುದಿರಾಮ್ರನ್ನು ಗಲ್ಲಿಗೇರಿಸಲು ಕರೆತಂದಾಗ ಈತನನ್ನು ಸ್ವಾಗತಿಸಲು ಮುಝಫ್ಫರ್ಪುರದಲ್ಲಿ ಜನಸಾಗರವೇ ನೆರೆದಿತ್ತು. ಕೇವಲ ಹದಿನೈದನೆಯ ವಯಸ್ಸಿಗೆ ಈ ಮಟ್ಟಕ್ಕೆ ಜನಸ್ತೋಮದ ಮನಸ್ಸನ್ನು ಗೆದ್ದಿದ್ದ ಸ್ವಾತಂತ್ರ ಹೋರಾಟಗಾರ ಭಾರತದ ಇತಿಹಾಸದಲ್ಲಿ ಬೇರಾರೂ ಸಿಗುವುದಿಲ್ಲ. ಖುದಿರಾಮ್ರ ಯೋಜನೆ ಕಿಂಗ್ಸ್ ಫೋರ್ಡ್ನನ್ನು ಕೊನೆಗಾಣಿಸಲು ವಿಫಲವಾಯಿತಾದರೂ ಅದು ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿತು. ಮಾತ್ರವಲ್ಲದೆ ದೇಶವನ್ನು ಸ್ವಾತಂತ್ರ್ಯಗೊಳಿಸಲು ಅತ್ಯಂತ ಕಿರಿಯ ವಯಸ್ಸಿಗೆ ಗಲ್ಲುಗಂಬವೇರಿದ ಕೀರ್ತಿಗೆ ಖುದಿರಾಮ್ ಪಾತ್ರರಾದರು.
ತನ್ನ ವಿರುದ್ಧದ ಹೋರಾಟವನ್ನು ದಮನಗೊಳಿಸಲು ಅಂದಿನ ಬ್ರಿಟಿಷ್ ಸರಕಾರ ಬಂಗಾಳ ವಿಭಜನೆಯ ಮೂಲಕ ಹಿಂದೂ-ಮುಸ್ಲಿಮರ ಐಕ್ಯತೆಯನ್ನು ಮುರಿಯಲೆತ್ನಿಸಿದರೂ ಅಂದಿನ ಜನತೆ ‘ಒಡೆದು ಆಳುವ ನೀತಿ’ಗೆ ಬಲಿಯಾಗದೆ ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ಹೋರಾಡಿದಂತೆ ಇಂದಿನ ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆಗಳ ವಿರುದ್ಧ ಜನರು ಯಾವುದೇ ರೀತಿಯ ‘ಒಡೆದು-ಆಳುವ’ ಕುತಂತ್ರಗಳಿಗೆ ಒಳಗಾಗದೆ ಒಟ್ಟುಗೂಡಿ ಹೋರಾಡಲು ಖುದಿರಾಮ್ರ ಜೀವನಗಾಥೆ ನಮಗೆಲ್ಲರಿಗೂ ಪ್ರೇರಣೆಯಾಗಲಿ.