ಕೃಷಿಕರಿಗೆ ವೈವಿಧ್ಯತೆಯ ಅರಿವು ಮೂಡಿಸುವಲ್ಲಿ ಕಿಸಾನ್ ವಾಣಿ ಪೂರಕ : ಟಿ.ಶ್ಯಾಮ್ ಪ್ರಸಾದ್
![ಕೃಷಿಕರಿಗೆ ವೈವಿಧ್ಯತೆಯ ಅರಿವು ಮೂಡಿಸುವಲ್ಲಿ ಕಿಸಾನ್ ವಾಣಿ ಪೂರಕ : ಟಿ.ಶ್ಯಾಮ್ ಪ್ರಸಾದ್ ಕೃಷಿಕರಿಗೆ ವೈವಿಧ್ಯತೆಯ ಅರಿವು ಮೂಡಿಸುವಲ್ಲಿ ಕಿಸಾನ್ ವಾಣಿ ಪೂರಕ : ಟಿ.ಶ್ಯಾಮ್ ಪ್ರಸಾದ್](https://www.varthabharati.in/sites/default/files/images/articles/2021/08/11/302189-1628687542.jpg)
ಶಿರ್ವ, ಆ.11: ಮಂಗಳೂರು ಆಕಾಶವಾಣಿಯಲ್ಲಿ ಪ್ರತಿದಿನ ಪ್ರಸಾರವಾಗುವ ಕೃಷಿರಂಗ(ಕಿಸಾನ್ ವಾಣಿ) ಕಾರ್ಯಕ್ರಮ ಕೃಷಿಕರಿಗೆ ಆಧುನಿಕ ತಂತ್ರಜ್ಞಾನದ ಜೊತೆಗೆ ವೈವಿಧ್ಯತೆಯ ಅರಿವು ಮೂಡಿಸುವಲ್ಲಿ ಪೂರಕವಾಗಿದೆ ಎಂದು ಮಂಗಳೂರು ಆಕಾಶವಾಣಿಯ ಕಿಸಾನ್ವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಟಿ.ಶ್ಯಾಮ್ ಪ್ರಸಾದ್ ಹೇಳಿದ್ದಾರೆ.
ಬಂಟಕಲ್ಲು ರೋಟರಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಕಾಪು ತಾಲೂಕು ವ್ಯಾಪ್ತಿಯ ಕೃಷಿ ಹಾಗೂ ಪೂರಕ ಚಟುವಟಿಕೆಗಳಲ್ಲಿ ವಿಶಿಷ್ಠ ಸಾಧನೆ ಮಾಡುತ್ತಿರುವ ಸಾಧಕರ ಅನುಭವ ಧ್ವನಿಮುದ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಪೋನ್ ಔಟ್ ರೆಕಾರ್ಡಿಂಗ್ ಮೂಲಕ ಸಂದರ್ಶನ, ಸಾವಯವ ಮಾತುಕತೆ, ಅಡಿಕೆ ಕೃಷಿಯ ಬಗ್ಗೆ 15ದಿನಗಳ ಸರಣಿ ಕಾರ್ಯಕ್ರಮ, ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ದಲ್ಲಿ ಆ.16ರಿಂದ 2022 ಆ.14ರ ವರೆಗೆ ವರ್ಷ ಪೂರ್ತಿ ಭಾರತೀಯ ಅಂಚೆ ಇಲಾಖೆ ಪ್ರಾಯೋಜಿತ ಸರಣಿ ಕಾರ್ಯಕ್ರಮಗಳು ವಿಶೇಷವಾಗಿ ಪ್ರಸಾರವಾಗಲಿವೆ ಎಂದರು.
ಅಧ್ಯಕ್ಷತೆಯನ್ನು ರೋಟರಿ ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಶಿರ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ತಾರಸಿ ಕೃಷಿ ಕೈತೋಟ ಪ್ರವೀಣೆ ಸಂಧ್ಯಾ ಜಿ.ಇಂದ್ರಾಳಿ, ಹಸಿಕಸವನ್ನು ಸಾವ ಯವವಾಗಿ ಪರಿವರ್ತಿಸುವ ಸಾಧಕ ಭಾಸ್ಕರ ಶೆಟ್ಟಿ ಹೆಜಮಾಡಿ, ಭತ್ತದ ಕೃಷಿಯ ಪ್ರಗತಿಪರ ರೈತ ನಿತ್ಯಾನಂದ ನಾಯಕ್ ಪಾಲಮೆ, ಕೋಳಿ ಸಾಕಣೆಯಿಂದ ಸ್ವಾವಲಂಬನೆ ಸಾಧಿಸಿದ ಡೆಸ್ಮಾಂಡ್ ಆಲ್ಬನ್ ಪೆರಾವೊ ಶಿರ್ವ, ತಿಲಪಿಯ ಮೀನುಸಾಕಣೆ (ಸಾವಯವ ಮಾದರಿ) ಸ್ಕೈ ಅರ್ಗಾನಿಕ್ ಫಿಶ್ ಪಾರ್ಮ್ನ ಶೇಖ್ ಖಾಲಿದ್ ತೆಂಕ ಎರ್ಮಾಳ್, ಮರದ ಸ್ನೇಹಿತರು ಪ್ರಾಣೇಶ್ ಹೆಜ್ಮಾಡಿ, ಮಳೆಗಾಲದ ತರಕಾರಿಗಳ ಬಗ್ಗೆ ರಾಘವೇಂದ್ರ ನಾಯಕ್ ಶಿರ್ವ ಇವರ ಕೃಷಿ ಹಾಗೂ ಪೂರಕ ಸಾಧನೆ ಗಳ ಧ್ವನಿಮುದ್ರಣ ಮಾಡಲಾಯಿತು.