ಕೋವಿಡ್ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ: ಸಿಎಂ ಬೊಮ್ಮಾಯಿ
![ಕೋವಿಡ್ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ: ಸಿಎಂ ಬೊಮ್ಮಾಯಿ ಕೋವಿಡ್ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ: ಸಿಎಂ ಬೊಮ್ಮಾಯಿ](https://www.varthabharati.in/sites/default/files/images/articles/2021/08/12/302382-1628786705.jpg)
ಉಡುಪಿ, ಆ.12: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಉಡುಪಿಯು ದ.ಕ. ಜಿಲ್ಲೆಯೊಂದಿಗೆ ದಿನನಿತ್ಯದ ಸಂಬಂಧ ಹೊಂದಿರುವುದರಿಂದ ಹಾಗೂ ಕೇರಳ ಮತ್ತು ಮುಂಬೈಯವರು ಹೆಚ್ಚಿನ ಜನ ಬರುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಪಂ ಕಚೇರಿಯಲ್ಲಿ ಗುರುವಾರ ನಡೆದ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.2.67 ಇದ್ದು, ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿದೆ. ಕಳೆದ ಬಾರಿ ಎರಡನೇ ಅಲೆಯಲ್ಲಿ ಉಡುಪಿ ಜಿಲ್ಲೆಯ ಕೋವಿಡ್ ಪ್ರಕರಣಗಳು ಇದೇ ರೀತಿ ಪ್ರಾರಂಭವಾಗಿ ಇಡೀ ರಾಜ್ಯ ದಲ್ಲಿ ಹಬ್ಬಿದೆ. ಮಣಿಪಾಲ ಆಸ್ಪತ್ರೆಗೆ ಐದಾರು ಜಿಲ್ಲೆಗಳಿಂದ ಜನ ಬರುತ್ತಿರುವುದುರಿಂದ ಹೆಚ್ಚಿನ ನಿಗಾ ವಹಿಸುಂತೆ ಸೂಚನೆ ನೀಡಲಾಗಿದೆ ಎಂದರು.
24 ಗಂಟೆಯೊಳಗೆ ವರದಿ
ಜಿಲ್ಲೆಯಲ್ಲಿ ಕೊರೋನ ಪರೀಕ್ಷೆಯನ್ನು 3000ದಿಂದ 5000ಕ್ಕೆ ಹೆಚ್ಚಿಸಲಾಗುತ್ತಿದೆ. ಪರೀಕ್ಷೆಯ ವರದಿಯನ್ನು ಎರಡು ಮೂರು ದಿನಗಳ ಬದಲು 24 ಗಂಟೆಯೊಳಗೆ ಕೊಡುವುದಾಗಿ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜಿಲ್ಲೆಯಲ್ಲಿ ಸದ್ಯ ಒಂದು ಸೋಂಕಿತರಿಗೆ 10 ಮಂದಿಯನ್ನು ಟ್ರಾಕಿಂಗ್ ಮಾಡಲಾಗುತ್ತಿದೆ. ಆತ ಇರುವ ಸ್ಥಳ ಮಾತ್ರವಲ್ಲದೆ ಕೆಲಸ ಮಾಡುವ ಹಾಗೂ ಓಡಾಡುವ ಸ್ಥಳವನ್ನು ಕೂಡ ಪರಿಶೀಲಿಸಿ ಕನಿಷ್ಟ 20 ಮಂದಿಯನ್ನು ಟ್ಯಾಕಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸೋಂಕಿತರ ಪೈಕಿ ಶೇ.85ರಷ್ಟು ಮಂದಿ ಹೋಮ್ ಐಸೋಲೇಶನ್ನಲ್ಲಿದ್ದಾರೆ. ಅಗತ್ಯ ಇರುವವ ರನ್ನು ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಮೈಕ್ರೋ ಕಂಟೈನ್ಮೆಂಟ್ ಝೋನ್
ಜಿಲ್ಲೆಯಲ್ಲಿ ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ತೆಗೆದು ಕೊಳ್ಳಲಾಗಿದೆ ಐಸಿಯು ಬೆಡ್ಗಳನ್ನು ಹಾಗೂ ವೆಂಟಿಲೇಟರ್ ಹೆಚ್ಚಿಸಲಾಗಿದೆ. ಈ ಇರುವ 161 ವೆಂಟಿಲೇಟರ್ಗಳಲ್ಲಿ 19 ಭರ್ತಿಯಾಗಿದೆ ಮತ್ತು 317 ಆಕ್ಸಿಜನ್ ಬೆಡ್ಗಳಲ್ಲಿ 38 ಭರ್ತಿಯಾಗಿವೆ. ಕಾರ್ಕಳ, ಉಡುಪಿ, ಕುಂದಾಪುರ ದಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ 15-20ದಿನಗಳಲ್ಲಿ ಎಲ್ಲ ಘಟಕಗಳು ಕಾರ್ಯಾರಂಭ ಮಾಡಲಾಗಿದೆ. ನಾಲ್ಕೈದು ಮನೆಗಳನ್ನು ಸೇರಿಸಿ ಮೈಕ್ರೋ ಕಂಟೈನ್ಮೆಂಟ್ ರೆನ್ ಮಾಡುವಂತೆ ಸೂಚಿಸಿಲಾಗಿದೆ ಎಂದು ಅವರು ಹೇಳಿದರು.
ಲಸಿಕೆಯಲ್ಲಿ ಶೇ.59 ಮೊದಲ ಡೋಸ್ ಮತ್ತು ಶೇ.21 ಎರಡನೇ ಡೋಸ್ ನೀಡಲಾಗಿದೆ. ಇದನ್ನು ಹೆಚ್ಚಿಸಲು ಹೆಚ್ಚಿನ ಲಸಿಕೆ ಪೂರೈಸುವ ಅವಶ್ಯಕತಚತೆ ಇದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಅಲ್ಲಿಂದ ಲಸಿಕೆ ಬಂದರೆ ಉಡುಪಿ ಜಿಲ್ಲೆಗೂ ಲಸಿಕೆ ಸರಬರಾಜು ಮಾಡಲಾಗುವುದು. ಜಿಲ್ಲೆಯಲ್ಲಿ 1.75ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಇಂಧನ ಸಚಿವ ಸುನೀಲ್ ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಜಿಲ್ಲಾಧಿಕಾರಿ ಜಿ.ಜಗದೀಶ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಹಬ್ಬಗಳಿಗೆ ಪ್ರತ್ಯೇಕ ಮಾರ್ಗಸೂಚಿ
ಕಳೆದ ವರ್ಷದಂತೆ ಈ ವರ್ಷವೂ ಮುಂದೆ ಬರುವ ಹಬ್ಬಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೋವಿಡ್ ಮೂರನೇ ಅಲೆ ತಡೆಗಟ್ಟಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳ ಲಾಗುವುದು. ಸೆಪ್ಟಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಮೂರನೆ ಅಲೆಯ ಸಂಪೂರ್ಣ ಚಿತ್ರಣ ದೊರೆಯಲಿದೆ. ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೋವಿಡ್ ತುದಿಯಲ್ಲಿರುವ ಸಂದರ್ಭದಲ್ಲಿರುವಾಗ ಮಾಡಿರುವಂತೆ ಗಂಭೀರತೆಯಿಂದ ಕೆಲಸ ಮಾಡಲು ಆದೇಶ ನೀಡಲಾಗಿದೆ. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಕೆಲಸ ಮಾಡಲು ಸನ್ನದ್ಧವಾಗಿದೆ ಎಂದರು.