ಸರಕಾರಿ ಜಮೀನಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಮಹತ್ವದ ತೀರ್ಪು
ಉಡುಪಿ, ಆ.13: ಜಿಲ್ಲೆಯ ಉಡುಪಿ ತಾಲೂಕು ಅಂಜಾರು ಗ್ರಾಮದ ಸುಮಾರು 11 ಎಕ್ರೆಗೂ ಮೀರಿದ ಸರಕಾರಿ ಜಮೀನನ್ನು ತನ್ನದೆಂದು ಘೋಷಿಸುವಂತೆ, ಅಂಜಾರು ಗ್ರಾಮದ ದಿ. ಬಾಲಕೃಷ್ಣ ಹೆಗ್ಡೆ ಹಾಗೂ ಇತರರು ರಾಜ್ಯ ಸರಕಾರದ ವಿರುದ್ಧ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಿದ್ದು, ಈ ಬಗ್ಗೆ ಜಿಲ್ಲಾ ಪ್ರಧಾನ ನ್ಯಾಯಾಲು ಈಗ ಮಹತ್ವದ ತೀರ್ಪು ನೀಡಿದೆ.
ಈ ವ್ಯಾಜ್ಯವನ್ನು ಮಾನ್ಯ ಮಾಡಿದ್ದ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಲಯ (ಹಿರಿಯ ವಿಭಾಗ) 2004ರ ಸೆ.28ರಂದು ವಾದಿಗಳ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಉಡುಪಿಯ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ನಿಯತಕಾಲಿಕ ಮೇಲ್ಮನ ವಿಯನ್ನು ದಾಖಲಿಸಿತ್ತು. ಮೇಲ್ಮನವಿಯನ್ನು ಆಲಿಸಿದ ಪ್ರಧಾನ ಜಿಲ್ಲಾ ನ್ಯಾಯಾಲಯವು ಆಗಸ್ಟ್ 10 ರಂದು ನೀಡಿದ ತನ್ನ ತೀರ್ಪಿನನ್ವಯ, ಕೆಳ ನ್ಯಾಯಾಲಯವು ನೀಡಿದ ತೀರ್ಪನ್ನು ರದ್ದುಪಡಿಸಿದೆ.
ಮೇಲ್ಮನವಿಯಲ್ಲಿ ಸರಕಾರದ ಪರವಾಗಿ ಜಿಲ್ಲಾ ಸರ್ಕಾರಿ ವಕೀಲ ಸಂತೋಷ್ ಹೆಬ್ಬಾರ್ ಎ. ವಾದ ಮಂಡಿಸಿದ್ದರು. ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾರ್ಗದರ್ಶನದಲ್ಲಿ ಉಡುಪಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಹಾಗೂ ಉಪ ತಹಶೀಲ್ದಾರ್ ಸಿ.ಎಲ್. ಸುರೇಂದ್ರ ಬಾಬು ರವರು ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.