ಕಲ್ಲು ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಹಾಕದೆ ಮಕ್ಕಳು, ಬಡವರು ಮತ್ತು ರೋಗಿಗಳಿಗೆ ನೀಡಿ: ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಆ. 13, :ಹಬ್ಬಗಳ ಹೆಸರಿನಲ್ಲಿ ಹಾಲು ಅಮೃತ ಹಬ್ಬಗಳ ಆಚರಣೆ ಹೆಸರಿನಲ್ಲಿ ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಹಾಕದೇ ಮನೆಯಲ್ಲಿ ಹಿರಿಯರಿಗೆ, ಮಕ್ಕಳಿಗೆ, ಬಡವರಿಗೆ, ರೋಗಿಗಳಿಗೆ ನೀಡುವಂತೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದ ವಿರಕ್ತಮಠದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಶುಕ್ರವಾರ ಬಸವ ಕೇಂದ್ರ, ಮುರುಘರಾಜೇಂದ್ರ ವಿರಕ್ತಮಠ, ಶಿವಯೋಗಾಶ್ರಮದ ಸಹಯೋಗದಲ್ಲಿ ನಡೆದ ಹಾಲುಕುಡಿಸುವ ಹಬ್ಬ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂಢನಂಬಿಕೆಗಳನ್ನು ತೊಡೆದು ಹಾಕುವ ಮೂಲಕ ವೈಜ್ಞಾನಿಕವಾಗಿ ಹಾಗೂ ವೈಚಾರಿಕವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು ಎಂದರು.
ನಾಗರ ಪಂಚಮಿ ಹಬ್ಬದಲ್ಲಿ ಕಲ್ಲು ನಾಗರಕ್ಕೆ ಹಾಲನ್ನು ಎರೆಯುವ ಮೂಲಕ ಕುಡಿಯುವ ಹಾಲನ್ನು ಮಣ್ಣು ಪಾಲು ಮಾಡುತ್ತಾರೆ. ಹಾಲು ಅಮೃತ ಸಮಾನ ಹಾಗೂ ಸಂಜೀವಿನಿಯಾಗಿದ್ದು ಅದು ವಿಟಮಿನ್ ನೀಡುತ್ತದೆ. ದೇವರು ಧರ್ಮದ ಹೆಸರಿನಲ್ಲಿ ಹೋಮ, ಹವನದ ಸಂದರ್ಭದಲ್ಲಿ ಹಾಲು, ತುಪ್ಪ, ಜೇನುತುಪ್ಪ, ಬೆಲ್ಲ, ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ವ್ಯರ್ಥಮಾಡಬಾರದು ಎಂದರು.
ನಾಗರ ಪಂಚಮಿ ಹಬ್ಬ ಆಚರಿಸಬೇಕೆ ಉಂಡಿ, ಹಣ್ಣುಗಳನ್ನು ತಿನ್ನಿರಿ, ಜೋಕಾಲಿ ಆಡಿರಿ ಎಂದ ಅವರು, ಹಾವು ಹಾಲು ಕುಡಿಯುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯವಾಗಿದೆ. ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಕುಡಿಯಲು ಹಾಲು ಸಿಗುತ್ತಿಲ್ಲ. ಬಹಳಷ್ಟು ಮಕ್ಕಳು ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳು ವಯೋವೃದ್ಧರು, ರೋಗಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ ಹಾಲನ್ನು ನೀಡಬೇಕು ಈ ಮೂಲಕ ಮಾನನವರಲ್ಲಿ ನಿಜವಾದ ದೇವರನ್ನು ಕಾಣಬೇಕು ಎಂದು ಸಲಹೆ ನೀಡಿದರು.
ಹಾವುಗಳು ಹಾಲನ್ನು ಕೊಡುವುದಿಲ್ಲ, ಹಾವಿನ ಆಹಾರ ಇಲಿ, ಹುಳ ಹುಪ್ಪಡಿಗಳು. ಹಾವುಗಳು ಎಂದಿಗೂ ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ಕುಡಿಯುವುದರಿಂದ ಮೂಳೆಗಳು ಸದೃಢವಾಗುತ್ತವೆ ಹಾಗೂ ಆಯುಷ್ಯ ವೃದ್ಧಿಸುತ್ತದೆ. ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಜನರು ದುಶ್ಚಟಗಳಿಗೆ ಒಳಗಾಗಿ ಆಲ್ಕೋಹಾಲ್ ಸೇವಿಸುವ ಮೂಲಕ ತಮ್ಮ ಆಯುಷ್ಯವನ್ನು ಕ್ಷೀಣಿಸಿಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಜಾಗೃತಿ ಮೂಡಿಸುವುದರಿಂದ ಅವರಲ್ಲಿಯೂ ಸಹಾ ಹಾಲನ್ನು ವ್ಯರ್ಥ ಮಾಡಬಾರದು ಎಂಬ ಅರಿವು ಮೂಡುತ್ತದೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗದ ಡಾ.ಮುರುಘಾ ಶರಣರ ಮಾರ್ಗದರ್ಶನದಂತೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು 750ಕ್ಕೂ ಹೆಚ್ಚು ಬಸವ ಕೇಂದ್ರಗಳು ನಾಡಿನಾಧ್ಯಂತ ಆಚರಿಸುತ್ತಾ ಬಂದಿವೆ ಎಂದು ಹೇಳಿದರು.
ಹಾಸಬಾವಿ ಕರಿಬಸಪ್ಪ, ವಿವಿಎಫ್ ಸಂಘದ ಕಾರ್ಯದರ್ಶಿ ಎಂ.ಜಯಕುಮಾರ, ಟ್ರಸ್ಟ್ ಕಾರ್ಯದರ್ಶಿ ಎಸ್.ಓಂಕಾರಪ್ಪ, ಲಂಬಿ ಮುರುಗೇಶ, ಮಹಿಳಾ ಬಸವ ಕೇಂದ್ರದ ಮಹದೇವಮ್ಮ, ಎಸ್.ಜೆ.ಎಂ.ಶಾಲೆ ಮುಖ್ಯೋಪಾಧ್ಯಾಯ ರೋಷನ್, ಪಾರೂಕ್, ಜಗದೀಶ, ಶಿಕ್ಷಕರಾದ ಸೌಭಾಗ್ಯ, ಕುಮಾರಸ್ವಾಮಿ, ಶರಣಬಸವ ಇತರರು ಇದ್ದರು.







