ನೂತನ ವಿಜ್ಞಾನ ಆವಿಷ್ಕಾರ ರಾಷ್ಟ್ರಮಟ್ಟದ ಸ್ಪರ್ಧೆ : ಉಡುಪಿ ಜಿಲ್ಲೆಯ ಇಬ್ಬರು ಬಾಲಕಿಯರಿಗೆ ಪ್ರಶಸ್ತಿ
![ನೂತನ ವಿಜ್ಞಾನ ಆವಿಷ್ಕಾರ ರಾಷ್ಟ್ರಮಟ್ಟದ ಸ್ಪರ್ಧೆ : ಉಡುಪಿ ಜಿಲ್ಲೆಯ ಇಬ್ಬರು ಬಾಲಕಿಯರಿಗೆ ಪ್ರಶಸ್ತಿ ನೂತನ ವಿಜ್ಞಾನ ಆವಿಷ್ಕಾರ ರಾಷ್ಟ್ರಮಟ್ಟದ ಸ್ಪರ್ಧೆ : ಉಡುಪಿ ಜಿಲ್ಲೆಯ ಇಬ್ಬರು ಬಾಲಕಿಯರಿಗೆ ಪ್ರಶಸ್ತಿ](https://www.varthabharati.in/sites/default/files/images/articles/2021/08/14/302610-1628956593.jpg)
ಉಡುಪಿ, ಆ.14: ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಅತ್ಯಂತ ಕುಗ್ರಾಮವಾದ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಕೀರ್ತಿ ಇದೀಗ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ.
ಅಲ್ಬಾಡಿ-ಆರ್ಡಿ ಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಅನುಷಾ ಮತ್ತು ರಕ್ಷಿತಾ ನಾಯ್ಕಿ ಇವರು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರತಿವರ್ಷ ರಾಷ್ಟ್ರಮಟ್ಟದಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ನಡೆಸುವ ‘ಶಾಲಾ ಮಕ್ಕಳ ಸಿಎಸ್ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೌನ್ಸಿಲ್) ಅನ್ವೇಷಣಾ ಪ್ರಶಸ್ತಿ- 2021’ರಲ್ಲಿ ನಾಲ್ಕನೇ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಡುಪಿ ಜಿಲ್ಲೆಯ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಅದೂ ತೀರಾ ಹಿಂದುಳಿದ ಕುಡುಬಿ ಜನಾಂಗದ ಇಬ್ಬರು ಬಾಲಕಿಯರ ಈ ಸಾಧನೆ ಅತ್ಯಂತ ಪ್ರಶಂಸಾರ್ಹ ಯಾಕೆಂದರೆ, ಸಿಎಸ್ಐಆರ್ ಪ್ರಶಸ್ತಿಗೆ ಆಯ್ಕೆ ಮಾಡಿರುವ ದೇಶದ ಒಟ್ಟು 14 ಶಾಲೆಗಳಲ್ಲಿ ಸರಕಾರಿ ಶಾಲೆಯಿಂದ ಬಂದ ಮಕ್ಕಳು ಇವರು ಮಾತ್ರ. ಉಳಿದೆಲ್ಲ ಪ್ರಶಸ್ತಿ ವಿಜೇತರು ಹೊಸದಿಲ್ಲಿ ಸೇರಿದಂತೆ ನಗರ ಪ್ರದೇಶಗಳಿಂದ ಬಂದ ಮಕ್ಕಳಾಗಿದ್ದಾರೆ.
ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ 14 ಶಾಲೆಗಳಲ್ಲಿ ಇಡೀ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಶಾಲೆಯೂ ಇದಾಗಿದೆ. ಅನುಷಾ ಮತ್ತು ರಕ್ಷಿತ ನಾಯಕ್ ಅವರಿಗೆ ದೇಶದಲ್ಲಿ ನಾಲ್ಕನೇ ಪ್ರಶಸ್ತಿ ತಂದು ಕೊಟ್ಟಿರುವ ಹೊಸ ವಿಜ್ಞಾನ ಆವಿಷ್ಕಾರ ‘ಗ್ಯಾಸ್ ಉಳಿತಾಯದ ಕಿಟ್’ (ಜಿಎಸ್ಕೆ). ಇದೀಗ ಈ ಇಬ್ಬರು ಬಾಲಕಿಯರ ಮೂಲಕ ಅಲ್ಬಾಡಿ-ಆರ್ಡಿ ಹೆಸರು ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ದೇಶದ 10ನೇ ತರಗತಿ ವಿದ್ಯಾರ್ಥಿ ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮದಲ್ಲಿ ಇದೇ ಶಾಲೆಯ ಅನುಷಾ ಎಂಬ ವಿದ್ಯಾರ್ಥಿನಿ ಭಾಗವಹಿಸುವ ಅರ್ಹತೆ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಳು.
ಏಕೈಕ ಸರಕಾರಿ ಶಾಲೆ
ದೇಶದ ಭವಿಷ್ಯದ ವಿಜ್ಞಾನ ಆವಿಷ್ಕಾರಗಳನ್ನು ಸಂಶೋಧಿಸುವ ವಿಜ್ಞಾನಿಗಳನ್ನು ಗುರುತಿಸಲು ಸಿಎಸ್ಐಆರ್ ಪ್ರತಿವರ್ಷ ಈ ಸ್ಪರ್ಧೆಯನ್ನು ನಡೆಸುತ್ತದೆ. ಇದರಲ್ಲಿ ಭಾಗವಹಿಸಲು ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ ಆರಂಭಿಕ ಸುತ್ತಿನ ಪರೀಕ್ಷೆಗಳ ಬಳಿಕ ಕೊನೆಯ ಪ್ರಶಸ್ತಿ ಹಂತಕ್ಕೆ ಆಯ್ಕೆಯಾದ ಕೇವಲ 14 ಶಾಲೆಗಳಲ್ಲಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಅಲ್ಬಾಡಿ-ಆರ್ಡಿ ಒಂದಾಗಿತ್ತು. ಇದು ದೇಶದಲ್ಲಿ ಆಯ್ಕೆಯಾದ ಏಕೈಕ ಸರಕಾರಿ ಶಾಲೆ ಎಂಬುದರೊಂದಿಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಶಾಲೆಯೂ ಆಗಿತ್ತು.
ಹಳ್ಳಿಯ ಮಕ್ಕಳು ದಿಲ್ಲಿಗೆ...
ಹೊಸದಿಲ್ಲಿಯಲ್ಲಿ ಮುಂದೆ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ 14 ಶಾಲೆಗಳ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಸೆ.26ರಂದು ನಡೆಯಬೇಕಾಗಿದ್ದ ಈ ಕಾರ್ಯಕ್ರಮದ ದಿನಾಂಕ ವನ್ನು ಮುಂದೆ ತಿಳಿಸಲಾಗುವುದು ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯ ಮಾಹಿತಿ ನೀಡಿದೆ.
ಶಾಲೆಯ ಶಿಕ್ಷಕ ವೃಂದವೇ ಭಾಗಿ
ಶಾಲೆಯ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಅವರ ಮಾರ್ಗದರ್ಶನದಲ್ಲಿ ಜಿಎಸ್ಕೆ ಕಿಟ್ನ್ನು ಸಿದ್ಧಪಡಿಸಲಾಗಿತ್ತು. ಮುಖ್ಯ ಶಿಕ್ಷಕರಾದ ಶೇಖರ್ ಶೆಟ್ಟಿಗಾರ್ ನೇತೃತ್ವದಲ್ಲಿ ಕಿಟ್ಗೆ ಅಗತ್ಯ ವಸ್ತುಗಳ ಆಯ್ಕೆ ಹಾಗೂ ಸಂಗ್ರಹ ಸೇರಿದಂತೆ, ಉಪಕರಣದ ವೈಜ್ಞಾನಿಕ ಆಯಾಮ, ಅವುಗಳ ವಿನ್ಯಾಸ, ಜೋಡಣೆಗಳಲ್ಲಿ, ಸಾಹಿತ್ಯ ರಚನೆಗಳಲ್ಲಿ ಶಾಲೆಯ ಎಲ್ಲಾ ಶಿಕ್ಷಕರೂ ಹಾಗೂ ಇತರ ಸಿಬ್ಬಂದಿಗಳೂ ಭಾಗಿಯಾಗಿದ್ದರು.
600 ರೂ. ವೆಚ್ಚದಲ್ಲಿ ನಿರ್ಮಾಣ
ಕೇವಲ 600 ರೂ. ವೆಚ್ಚದಲ್ಲಿ ಅನಿಲ ಉಳಿತಾಯ ಕಿಟ್ (ಜಿ.ಎಸ್.ಕೆ.) ಉಪಕರಣವನ್ನು, ಗ್ಯಾಸ್ ಸ್ಟೌವಿಗೆ ಅಳವಡಿಸಿದರೆ, ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ, ಇಡೀ ಕುಟುಂಬಕ್ಕೆ ಬೇಕಾಗುವಷ್ಟು ಸ್ನಾನದ ಬಿಸಿ ನೀರು ಪುಕ್ಕಟೆಯಾಗಿ ದೊರಕುತ್ತದೆ! ಇದನ್ನು ಎಲ್ಲಾ ಮನೆ, ಹೋಟೇಲ್ಗಳಲ್ಲಿ ಬಳಸಿದರೆ, ದಿನವೊಂದಕ್ಕೆ ಲಕ್ಷಗಟ್ಟಲೆ ಟನ್ ಎಲ್ಪಿಜಿ ಅನಿಲ ಉಳಿತಾಯವಾಗುತ್ತದೆ ಎಂಬುದನ್ನು ಈ ಇಬ್ಬರು ಪುಟಾಣಿಗಳು ಲೆಕ್ಕಮಾಡಿ ತೋರಿಸಿದ್ದಾರೆ. ಈ ಕಿಟ್ನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕೆ ಪೇಟೆಂಟ್ ಪಡೆಯಲು ಈಗಾಗಲೇ ತಯಾರಿಯೂ ನಡೆಯುತ್ತಿದೆ.
ಆರು ದಶಕಗಳ ಶಾಲೆ
ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳಲ್ಲೊಂದಾಗಿರುವ ಅಲ್ಬಾಡಿ-ಅರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಕಳೆದ ಆರು ದಶಕಗಳಿಂದ ಆಸುಪಾಸಿನ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು, ಬದುಕನ್ನು ರೂಪಿಸಿದ ವಿದ್ಯಾದೇಗುಲ ವಾಗಿದೆ. ಇದೀಗ ಶಾಲೆಯ ಇಬ್ಬರು ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ಎಲ್ಲರ ಗಮನ ಸೆಳೆಯುತ್ತಿದೆ.
ಮೂರನೇ ಬಾರಿ ಶಾಲೆಯು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದಕ್ಕೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಶಾಲೆಯ ಸಂಸ್ಥಾಪಕ ರಾದ ಚಾರಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್ ಅಪಾರ ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
''ರಾಷ್ಟ್ರಮಟ್ಟದ ಪ್ರಶಸ್ತಿಯ ಕಲ್ಪನೆಯನ್ನು ಕೂಡಾ ನಾನು ಮಾಡಿರಲಿಲ್ಲ. ಅದರಲ್ಲೂ ಈ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಜಯಿಸಿದ ಶಾಲೆಗಳಲ್ಲಿ ನಮ್ಮ ಶಾಲೆ ಮಾತ್ರ ಇಡೀ ದೇಶದಲ್ಲೇ ಏಕೈಕ ಸರಕಾರಿ ಶಾಲೆ ಎಂಬುದು ನಮಗೆ ಅತ್ಯಂತ ಹೆಮ್ಮೆ ಹಾಗೂ ಸಂತೋಷವನ್ನು ತಂದಿದೆ. ನಮ್ಮ ಜಿಎಸ್ಕೆ ಪ್ರಯೋಗಕ್ಕೆ ಮಾರ್ಗದರ್ಶನ ಮಾಡಿದ ನಮ್ಮ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಮೇಡಂಗೆ, ನಮ್ಮಿಬ್ಬರ ಈ ಸಾಧನೆಗೆ ಮೂಲ ಕಾರಣಕರ್ತರಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಇವರನ್ನು ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ''.
-ಅನುಷಾ, 10ನೇ ತರಗತಿ, ಸಿಎಸ್ಐಆರ್ 2021 ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿನಿ
''ನಮ್ಮ ಶಾಲೆ ಇದೀಗ ಮೂರನೇ ಬಾರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಂಡಿರುವುದು ಅತ್ಯಂತ ಸಂತೋಷವನ್ನು ನೀಡಿದೆ. ಈ ಬಾರಿ ಸಿಎಸ್ಐಆರ್ ನಲ್ಲಿ ನಮ್ಮ ವಿದ್ಯಾರ್ಥಿಗಳು ರಾಷ್ಟ್ರಪ್ರಶಸ್ತಿ ಪಡೆದಿರುವುದು ಅತ್ಯಂತ ಹರ್ಷವನ್ನು ತಂದಿದೆ. ಇದಕ್ಕೆ ಕಾರಣರಾದ ನಮ್ಮೆಲ್ಲಾ ಸಹೋದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ರಕ್ಷಿತ ನಾಯ್ಕ ಇವರಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
- ಶೇಖರ್ ಶೆಟ್ಟಿಗಾರ್, ಮುಖ್ಯ ಶಿಕ್ಷಕರು, ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಅಲ್ಬಾಡಿ-ಅರ್ಡಿ
ಕರೀಮ್ ನಗರ ಶಾಲೆಗೆ ಪ್ರಥಮ ಪ್ರಶಸ್ತಿ
ಈ ಬಾರಿಯ ಸ್ಪರ್ಧೆಯಲ್ಲಿ ತೆಲಂಗಾಣ ರಾಜ್ಯ ಕರೀಮ್ ನಗರ ಜಿಲ್ಲೆಯ ಪದ್ಮನಗರದ ಪರಿಮಿತ ಹೆರಿಟೇಜ್ ಸ್ಕೂಲ್ನ ಇಬ್ಬರು ವಿದ್ಯಾರ್ಥಿಗಳು ಕೃಷಿಯಲ್ಲಿ ಬಳಸಬಹುದಾದ ‘ಮ್ಯಾಜಿಕಲ್ ಹೆಕ್ಸಗನ್’ ನಿರ್ಮಾಣಕ್ಕೆ ದೇಶಲ್ಲಿ ಪ್ರಥಮ ಪ್ರಶಸ್ತಿ ಗೆದ್ದಿದ್ದಾರೆ.
ಚೆನ್ನೈ ಅಣ್ಣಾನಗರದ ಎಸ್ಬಿಓಎ ಸ್ಕೂಲ್ ಹಾಗೂ ಹೊಸದಿಲ್ಲಿ ಸಾಕೆತ್ನ ಅಮಿಟಿ ಇಂಟರ್ನೇಷನಲ್ ಸ್ಕೂಲ್ ರನ್ನರ್ಅಪ್ ಪ್ರಶಸ್ತಿ ಗೆದ್ದು ಕೊಂಡಿದೆ. ಉಳಿದಂತೆ ಮೂರು ಶಾಲೆಗಳು ಮೂರನೇ ಹಾಗೂ ತಲಾ ನಾಲ್ಕು ಶಾಲೆಗಳು ನಾಲ್ಕು ಮತ್ತು ಐದನೇ ಪ್ರಶಸ್ತಿಗಳನ್ನು ಗೆದ್ದು ಕೊಂಡಿವೆ. ದಿಲ್ಲಿಯ ಐದು ಶಾಲೆಗಳು ಇದರಲ್ಲಿ ಸೇರಿವೆ. ಉಳಿದಂತೆ ಪ.ಬಂಗಾಳ, ಮಧ್ಯಪ್ರದೇಶ, ಕೇರಳ, ಪಂಜಾಬ್ನ ಶಾಲಾ ತಂಡಗಳು ಪ್ರಶಸ್ತಿ ವಿಜೇತರಲ್ಲಿ ಸೇರಿವೆ.