ಮಂತ್ರಿ ಸ್ಥಾನ ಸಿಗದಿದ್ದರೂ ಮೈತ್ರಿ ಸರಕಾರ ಬೀಳಿಸಿದ ಸಂತೋಷವಿದೆ: ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ (File Photo)
ಬೆಳಗಾವಿ, ಆ. 14: "ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಇತಿಹಾಸದಲ್ಲಿದೆ. ಅದೇ ರೀತಿಯಲ್ಲಿ ನನ್ನ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ದೇವರು ನೋಡಿಕೊಳ್ಳುತ್ತಾನೆ" ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಜಿಲ್ಲೆ ಅಥಣಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಸಹಜ. ಇಂತಹ ಷಡ್ಯಂತ್ರಗಳಿಗೆ ನಾನು ಹೆದರುವುದಿಲ್ಲ. ನನ್ನ ಸಿಡಿ ಪ್ರಕರಣ ಇತ್ಯರ್ಥ ಆಗಲು ಇನ್ನೂ ಒಂದು ವರ್ಷ ಆಗಲಿ, ನನಗೇನು ಆತುರವಿಲ್ಲ. ನಾನು ಮಂತ್ರಿ ಆಗಬೇಕೆಂದಿಲ್ಲ. ಮೈತ್ರಿ ಸರಕಾರ ಬೀಳಿಸಿದ ಸಮಾಧಾನ ನನಗಿದೆ" ಎಂದರು.
"ನನ್ನ ಸಹೋದರ ಇದ್ದಾನೆ, ಶಾಸಕ ಮಹೇಶ್ ಕುಮಟಳ್ಳಿ ಅವರಿದ್ದಾರೆ. ಅವರಿಗೆ ಬೇಕಾದರೂ ಪಕ್ಷದ ವರಿಷ್ಠರು ಮಂತ್ರಿ ಸ್ಥಾನ ನೀಡಲಿ. ಏನೇ ಆದರೂ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದ ಅವರು, ನನ್ನ ವಿರುದ್ಧದ ಸಿಡಿ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಆ ಬಗ್ಗೆ ಮಾತನಾಡುವದಿಲ್ಲ. ಆರೆಸೆಸ್ಸ್ ಮತ್ತು ಬಿಜೆಪಿ ಪಕ್ಷ ನೀಡಿದಷ್ಟು ಪ್ರೀತಿ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಎಂದೂ ಸಿಕ್ಕಿಲ್ಲ" ಎಂದು ರಮೇಶ್ ಜಾರಕಿಹೊಳಿ ಟೀಕಿಸಿದರು.
"ಮೈಸೂರಿನ ಸುತ್ತೂರು ಮಠದ ಶ್ರೀಗಳ ಸಲಹೆ ಕೇಳಿ ಅವರ ಆದೇಶ ಪಾಲಿಸಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿ, ಬಿಡಲಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸಿದ್ದಕ್ಕೆ ಈಗಲೂ ಸಂತೋಷವಿದೆ. ನಾನು ಮಂತ್ರಿ ಆಗುತ್ತೇನೋ ಇಲ್ಲೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿ ನಮ್ಮ ಸ್ನೇಹಿತ ಬಸವರಾಜ ಬೊಮ್ಮಾಯಿ ಆಗಿರುವುದು ಸಂತೋಷವಾಗಿದೆ" ಎಂದು ರಮೇಶ್ ಜಾರಕಿಹೊಳಿ ಇದೇ ವೇಳೆ ತಿಳಿಸಿದರು.
"ಸಚಿವ ಸ್ಥಾನಕ್ಕಿಂತ ನಮಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕು. ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತ್ಯಾಗ ಮನೋಭಾವದಿಂದ ಕೆಲಸ ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲ ತ್ಯಾಗಕ್ಕೂ ಸಿದ್ಧ. ರಾಜಕಾರಣದಲ್ಲಿ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಮಹೇಶ್ ಕುಮಟಳ್ಳಿ ಅವರಿಗೆ ಮುಂದಿನ ದಿನ ಹೆಚ್ಚಿನ ಸ್ಥಾನ ಸಿಗಬಹದು" ಎಂದು ರಮೇಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದರು.







