ಹಿಮಾಚಲಪ್ರದೇಶದಲ್ಲಿ ಭೂಕುಸಿತ: ಮತ್ತೆ 6 ಮೃತದೇಹಗಳು ಪತ್ತೆ, 23ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ಶಿಮ್ಲಾ, ಆ. 14: ಹಿಮಾಚಲ ಪ್ರದೇಶದ ಕಿನ್ನೌರ್ ಭೂಕಸಿತದ ಸಂಭವಿಸಿದ ಪ್ರದೇಶದಲ್ಲಿ ಮತ್ತೆ 6 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಶನಿವಾರ ಕೂಡ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಚಾರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೌರಾಗ್ರಾಮದಲ್ಲಿ ಅವಶೇಷಗಳ ಅಡಿಯಲ್ಲಿ 6 ಮೃತ ದೇಹಗಳನ್ನು ಪತ್ತೆಯಾಯಿತು ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಅವರು ಹೇಳಿದರು.
ನಾಪತ್ತೆಯಾಗಿರುವ ಇತರ 9 ಮಂದಿಗಾಗಿ ರಕ್ಷಣೆ ಹಾಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ನಿಚಾರ್ನ ಇಳಿಜಾರು ಪ್ರದೇಶದಲ್ಲಿ ಬಂಡೆಗಳು ಬೀಳಲು ಆರಂಭವಾಗಿದ್ದು, ಸುರಕ್ಷೆಯ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆ ವರೆಗೆ ವಾಹನ ಸಂಚಾರ ನಿಷೇಧಿಸಿ ಉಪ ವಿಭಾಗೀಯ ದಂಡಾಧಿಕಾರಿ (ಎಸ್ಡಿಎಂ) ಮನಮೋಹನ್ ಸಿಂಗ್ ಆದೇಶ ಜಾರಿ ಮಾಡಿದ್ದಾರೆ.
Next Story





