ಅ.15ರಂದು ಮಂಜೇಶ್ವರ ಶಾಸಕರಿಂದ ಉಪವಾಸ ಸತ್ಯಾಗ್ರಹ
ಮಂಜೇಶ್ವರ, ಆ.14: ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಪ್ರಯಾಣಿಕರ ಸಂಚಾರ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ಕರ್ನಾಟಕ ಸರಕಾರದ ವಿರುದ್ಧ ಸ್ವಾತಂತ್ರ್ಯದಿನದಂದು (ಆ.15) ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
‘ಒಂದು ದೇಶ ಒಂದು ಜನತೆ’ ಎಂಬ ಸಂಕಲ್ಪವನ್ನು ಗಾಳಿಗೆ ತೂರಿ ಸಂಕುಚಿತ ರಾಜಕೀಯ ಲಾಭಕ್ಕಾಗಿ ಈ ನಾಡನ್ನು ವಿಭಜಿಸಲು ಹುನ್ನಾರ ನಡೆಸುವ ಕರ್ನಾಟಕ ಸರಕಾರವು ದೇಶದ ಸಮಾನತೆ ಮತ್ತು ಸಹಿಷ್ಣುತೆಯ ಸಂಸ್ಕೃತಿಯನ್ನು ಕೊನೆಗಾಣಿಸುವ ಪ್ರಯತ್ನದಲ್ಲಿದೆ. ರಾಜ್ಯದ ಗಡಿಗಳಲ್ಲಿ ಲಸಿಕೆಯನ್ನು ಪಡೆದವರಿಗೆ ಟೆಸ್ಟ್ ಇಲ್ಲದೆ ಪ್ರಯಾಣವನ್ನು ನಡೆಸಲು ಅನುಮತಿ ನೀಡಬೇಕು ಎಂಬ ಕೇಂದ್ರ ಸರಕಾರದ ಆದೇಶವನ್ನು ನಿರಾಕರಿಸಿ ಮಲಯಾಳಿಗಳನ್ನು ಅದರಲ್ಲೂ ಪ್ರತ್ಯೇಕವಾಗಿ ಕಾಸರಗೋಡು ಜಿಲ್ಲೆಯ ಜನತೆಯೊಂದಿಗೆ ಅವರ ವೈರಾಗ್ಯ ಮನೋಭಾವದ ನಡವಳಿಕೆಯು, 75ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಭಾರತಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಎಕೆಎಂ ಅಶ್ರಫ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ರೋಗಿಗಳು, ಸಣ್ಣಪುಟ್ಟ ವ್ಯಾಪಾರಿ ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ದಿನಂಪ್ರತಿ ಸಂಚರಿಸುವ ಪ್ರಯಾಣಿಕರನ್ನು ಆರ್ಟಿಪಿಸಿಆರ್ ವರದಿಯನ್ನು ಮುಂದಿರಿಸಿ ಯಾತ್ರೆಯನ್ನು ನಿರ್ಬಂಧಿಸುವ ಕರ್ನಾಟಕ ಸರಕಾರವು ಜನ ಸಾಮಾನ್ಯರ ಮಧ್ಯೆ ಕೇರಳ ಜನತೆಯ ವಿರುದ್ಧ ಅಪಪ್ರಚಾರ ನಡೆಸುವವರಿಗೆ ಸಹಕಾರ ನೀಡುತ್ತಿದೆ. ಕರ್ನಾಟಕದಲ್ಲಿ ಕೋವಿಡ್ ಹರಡವುದು ಕೇರಳದ ಜನತೆಯ ಮೂಲಕ ಎಂಬ ಅಪಪ್ರಚಾರದ ಮೂಲಕ ಕೇರಳದ ವಿರುದ್ಧ ರಾಜಕೀಯ ಪಿತೂರಿ ಹಾಗೂ ಕರ್ನಾಟಕದ ಜನತೆಯಿಂದ ವಾಸ್ತವವನ್ನು ಮರೆಮಾಚಲು ಪ್ರಯತ್ನಿಸಲಾಗುತ್ತಿದೆ ಎಂದು ಅಶ್ರಫ್ ತಿಳಿಸಿದ್ದಾರೆ.
ಆ.15ರಂದು ತಲಪಾಡಿ ಗಡಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹವನ್ನು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.